Search This Blog

Monday 5 May 2014

                          ಹೆಚ್ಚುತ್ತಿರುವ ಅವಮರ್ಮಾದೆ ಹತ್ಯೆ 
                                                                                                              ಪ್ರದೀಪ್ ಮಾಲ್ಗುಡಿ
          ೧೯೫೭ರಲ್ಲಿ ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಅವರು “ಆಧುನಿಕ ಸಂದರ್ಭದಲ್ಲಿ ಜಾತಿಯು ಒಂದು ಹೊಸ ಬಗೆಯ ಸ್ಥಿತ್ಯಂತರಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ” ಎಂದಿದ್ದರು. ಸಮಾಜಶಾಸ್ತ್ರಜ್ಞರು ಇವರನ್ನು ಅನೇಕ ಸಂದರ್ಭದಲ್ಲಿ ಕಟುಟೀಕೆಗೆ ಗುರಿ ಮಾಡಿದ್ದರು. ಅವರ ’ಸಂಸ್ಕೃತೀಕರಣ’ ಪರಿಕಲ್ಪನೆಯನ್ನು ಅಂಚಿನ ಜಾತಿಯವರು ಆಮೂಲಾಗ್ರವಾಗಿ ತಿರಸ್ಕರಿಸಿದ್ದರು.
           ಆದರೆ ಪ್ರಸ್ತುತ ನಡೆಯುತ್ತಿರುವುದು ಮನೆತನದ ಗೌರವ ರಕ್ಷಣೆ, ಧರ್ಮ ಅಥವಾ ಜಾತಿಯ ಕಾರಣಕ್ಕಾಗಿ ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಅವಮರ್ಯಾದೆ ಹತ್ಯೆಗಳು ಅಮಾನವೀಯವಾಗಿ ನಡೆಯುತ್ತಿವೆ. ತಮ್ಮ ಕುಟುಂಬಕ್ಕೆ ಕೆಳಜಾತಿಯವರನ್ನು ಮದುವೆಯಾಗುವ ಮೂಲಕ ಅಗೌರವವನ್ನುಂಟು ಮಾಡುವುದು ಹಾಗೂ ಕುಟುಂಬದ ಮರ್ಯಾದೆಗೆ ಧಕ್ಕೆ ತರುವಂತೆ ಕುಟುಂಬದ ಮಹಿಳಾ ಸದಸ್ಯರು ನಡೆದುಕೊಂಡಾಗ, ಅದೇ ಕುಟುಂಬದ ಪುರುಷ ಸದಸ್ಯರು ಮಹಿಳೆಯರನ್ನು ಸಾಯಿಸುವ ಕುಕೃತ್ಯ ಮರ್ಯಾದೆ ಹತ್ಯೆಯೆಂದು ಹೆಸರಾಗಿದೆ. ಇದರ ಭೀಕರತೆ ಇಷ್ಟಕ್ಕೇ ನಿಲ್ಲುವುದಿಲ್ಲ. ಕುಟುಂಬದವರು ಏರ್ಪಡಿಸಿದ ಮದುವೆಯ ನಿರಾಕರಣೆ, ಅತ್ಯಾಚಾರಕ್ಕೊಳಗಾಗುವುದು, ವಿಚ್ಛೇದನ ನೀಡುವುದು, ವ್ಯಭಿಚಾರಕ್ಕಿಳಿಯುವುದು, ಬೇರೆ ಜಾತಿಯ ಯುವಕ ಅಥವಾ ಯುವತಿಯನ್ನು ಪ್ರೀತಿಸುವುದು, ಇವೆಲ್ಲಾ ಹತ್ಯೆಗೆ ಕಾರಣವಾಗುತ್ತಿವೆ.
           ಉತ್ತರ ಭಾರತವಂತೂ ಮರ್ಯಾದೆ ಹತ್ಯೆಯ ನೆಲೆಬೀಡಾಗಿದೆ. ಉತ್ತರಾಖಂಡ್, ಪಂಜಾಬ್, ರಾಜಸ್ತಾನ, ಹರ್ಯಾಣ, ಉತ್ತರ ಪ್ರದೇಶ ಮೊದಲಾದೆಡೆ ಈ ಹತ್ಯೆಗಳು ನಡೆಯುತ್ತಿವೆ. ಪ್ರೇಮವಿವಾಹ, ಅಂತರ್ಜಾತಿ ವಿವಾಹ, ಅಂತಧರ್ಮೀಯ ವಿವಾಹ ಅಥವಾ ಪ್ರೇಮಾಂಕರದ ಸಮಯದಲ್ಲೂ ಪ್ರೇಮಿಗಳ, ವಧು ಅಥವಾ ವರನ ಹತ್ಯೆ ಮಾಡುವುದು ಕೋಮುವಾದಿಗಳಿಗೆ ಹಾಗೂ ಮತಾಂಧರಿಗೆ ಉದ್ಯೋಗವಾಗಿಬಿಟ್ಟಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ವಿರಳವಾಗಿದ್ದವು. ಆದರೆ ಧಾರವಾಡ, ಮೈಸೂರು, ಬೆಂಗಳೂರು, ಮಂಡ್ಯ, ಮದ್ದೂರುಗಳಲ್ಲಿ ೨೦೧೧ರಿಂದ ದಾಖಲಾಗಿರುವ ಪ್ರಕರಣಗಳು ಕರ್ನಾಟಕದ ಮಟ್ಟಿಗೂ ಆತಂಕಕಾರಿಯಾಗಿ ಬೆಳೆಯುತ್ತಿವೆ. ಕರ್ನಾಟಕ ಸರ್ವಧರ್ಮ ಸಮನ್ವಯದ, ಶಾಂತಿಯ ನೆಲೆಬೀಡೆಂದು ಹೆಸರಾಗಿತ್ತು. ವಚನ ಚಳುವಳಿಯ ಸಮಯದಲ್ಲೇ ಅಂತರ್ಜಾತಿ ವಿವಾಹದ ಪ್ರಯತ್ನದ ಮೂಲಕ ಜಾತಿ ವಿನಾಶದ ಪ್ರಯತ್ನ ಆರಂಭವಾಗಿತ್ತು.
ಕುಟುಂಬ ಗೌರವದ ಹೆಸರಿನಲ್ಲಿ ತಮ್ಮ ಕರುಳ ಕುಡಿಗಳನ್ನು ಹತ್ಯೆ ಮಾಡುತ್ತಿರುವುದು ಮಾನವೀಯತೆಯ ಮೇಲೆ ನಡೆಯುತ್ತಿರುವ ಹಲ್ಲೆ. ಕರುಣೆಯ ಹೊನಲು ಹರಿಯಬೇಕಿದ್ದ ಸಂದರ್ಭದಲ್ಲಿ ಜಾತಿದ್ವೇಷದ ಕರಾಳ ನೆರಳು ಬೀಳುತ್ತಿರುವ ಪರಿಣಾಮ ಇಂತಹ ಅಮಾನುಷ ಹತ್ಯೆಗಳಿಗೆ ಕಾರಣವಾಗುತ್ತಿವೆ.

ಜಾತಿ, ಅಂತಸ್ತು, ಐಶ್ವರ್ಯ, ವರ್ಣಗಳ ಕಾರಣಕ್ಕೆ ಜಗತ್ತಿನಲ್ಲಿ ರಕ್ತಪಾತ ನಡೆದಿರುವುದು ಹೊಸದಲ್ಲ. ಆದರೆ, ತಮ್ಮ ಮಕ್ಕಳನ್ನೂ ಬೆಂಕಿಗೆ ಅರ್ಪಿಸುವ, ನೇಣು ಕುಣಿಕೆಗೆ ಏರಿಸುವ, ವಿಷವುಣಿಸುವ ಅಚಾತುರ್ಯಗಳು ನಾಗರಿಕ ಸಮಾಜಕ್ಕೆ ಗೌರವ ತರುವಂತಹವಲ್ಲ. ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಪ್ರವೇಶವಾಗುವ ವಿಷಯವನ್ನು ಕೇಳಿ ಹತ್ಯೆ ಮಾಡುತ್ತಿರುವ ಪೋಷಕರೇ ಎಷ್ಟು ಸುಖಿಸಿದ್ದರೋ? ಆದರೆ, ವಯಸ್ಸಿಗೆ ಬಂದ ಮಕ್ಕಳು ಅನ್ಯ ಜಾತಿ, ಧರ್ಮ, ಅಂತಸ್ತಿನವರನ್ನು ಮದುವೆಯಾಗುವುದನ್ನು ಸಹಿಸುತ್ತಿಲ್ಲ. ಇವರು ಬಾಳಿ ಬದುಕಬೇಕಾದ ಮಕ್ಕಳ ಭವ್ಯ ಭವಿಷ್ಯಕ್ಕಿಂತ, ತಮ್ಮ ಜಾತಿ, ಧರ್ಮ, ಅಂತಸ್ತುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ.
        ಮನುಷ್ಯ ಮೂಲತಃ ಸಂಘಜೀವಿ. ಅದರ ಜತೆಗೆ ಆತ ಉದಾರಿ. ಆದರೆ ಆಧುನಿಕ ಜಗತ್ತಿನಲ್ಲಿ ಶೈಕ್ಷಣಿಕ ತಿಳುವಳಿಕೆಯ ಹೊರತಾಗಿಯೂ ಮನುಷ್ಯಪ್ರೀತಿಯ ಸಂವೇದನೆಗಳಿಗೆ ಬದಲಾಗಿ ಜೀವವಿರೋಧಿಯಾಗಿ ವರ್ತಿಸುವ ಕ್ರಿಯೆ ಹೆಚ್ಚಾಗಿದೆ. ತಮ್ಮ ಸಂತಾನವನ್ನು ವೃದ್ಧಿಸುವ ಮುಂದಿನ ಜನಾಂಗದ ಅಭಿಲಾಷೆಗಳಿಗೆ ಕಿವುಡಾಗುವಷ್ಟು ಮೌಢ್ಯ ಆವರಿಸುತ್ತಿದೆ.
ಬರಬರುತ್ತಾ ಜಾತಿ ಬಲಿಷ್ಠವಾಗುತ್ತಿರುವುದಕ್ಕೆ ಈ ಕೆಟ್ಟ ಉದಾಹರಣೆಗಳು ಸಾಕ್ಷಿಯಾಗಿವೆ. ಬಡವರ, ಕೆಳಜಾತಿಯವರ ಜೊತೆ ಸೌಹಾರ್ದಯುತವಾದ ನಡವಳಿಕೆ, ಸಂಬಂಧ, ಹೊಂದಾಣಿಕೆಗಳ ಬದಲಾಗಿ ಸಮಾಜದಲ್ಲಿ ನಿರಂತರ ಸಂಘರ್ಷ ನಡೆಯುತ್ತಿರುವುದು ದುರಾದೃಷ್ಟಕರ. ಸಂಕರವೆಂಬುದು ಪ್ರಕೃತಿಯಷ್ಟೇ ಸಹಜವಾಗಿದ್ದರೂ ಶುದ್ಧತೆಯ ಅಮಲೇರಿಸಿಕೊಂಡಿರುವ ಆಧುನಿಕ ಮನುಷ್ಯರು ಅವನತಿಯ ಹಾದಿ ಹಿಡಿಯುತ್ತಿದ್ದಾರೆ. ಹಣ, ಕುಲ, ವಿದ್ಯೆ,  ರೂಪ, ಯೌವನ, ಬಲ, ಪರಿವಾರ, ಅಧಿಕಾರಗಳೆಂಬ ಅಷ್ಟಮದಗಳಿಂದ ಅರಿಷಡ್ವರ್ಗಗಳ ಕರಾಳ ಹಿಡಿತಕ್ಕೆ ಸಿಲುಕಿ ದುಷ್ಟರಾಗುತ್ತಿದ್ದಾರೆ. ಅಷ್ಟಮದ ಮತ್ತು ಅರಿಷಡ್ವರ್ಗಗಳಲ್ಲಿ ಯಾವ ಒಂದರ ದಾಳಿಗೆ ಮನುಷ್ಯ ತುತ್ತಾದರೂ ಬದುಕುವುದು ಕಷ್ಟಸಾಧ್ಯ. ಆದರೆ, ಈ ಎಲ್ಲವುಗಳ ಹಿಡಿತದಲ್ಲಿ ಆಧುನಿಕ ಮಾನವರು ಬಂಧಿಯಾಗಿದ್ದಾರೆ. ಇದರ ದುಷ್ಪರಿಣಾಮವನ್ನು ನಾವೀಗ ಕಣ್ಣೆದುರು ಕಾಣುತ್ತಿದ್ದೇವೆ.
      ಹುಸಿ ಮರ‍್ಯಾದೆಗೆ ಅಂಜುವ ಬದಲು ಬಂದದ್ದೆಲ್ಲವನ್ನೂ ಗೌರವದಿಂದ ಸ್ವೀಕರಿಸುವ ಉದಾರತೆ ನಮಗಿಂದು ರೂಢಿಯಾಗಬೇಕಿದೆ. ಇದುವರೆಗೆ ನಡೆದ ಇಂತಹ ಹತ್ಯೆಗಳಿಗೆ ಕಾರಣರಾದವರು ಈಗ ಸಮಾಜದಲ್ಲಿ ಅಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗಾದರೆ ಅವರು ಹತ್ಯೆಯ ಮೂಲಕ ಸಾಧಿಸಬೇಕೆಂದಿದ್ದ ಗೌರವ, ಈಗ ಇದ್ದುದಕ್ಕಿಂತ ಪಾತಾಳ ಸೇರಿದಂತಾಗಲಿಲ್ಲವೇ? ಇಂತಹ ಸಾಮಾನ್ಯ ಪ್ರಜ್ಞೆಯಿಂದ ಯೋಚಿಸಬೇಕಾಗಿದೆ. ಆಗ ಇಂತಹ ಹತ್ಯೆಗಳು ನಿಲ್ಲುವ ಸಾಧ್ಯತೆಗಳಿವೆ.
       ಇದರ ಹಿಂದೆ ಕೆಲಸ ಮಾಡುತ್ತಿರುವುದು ಮೂಢನಂಬಿಕೆ. ವೈಚಾರಿಕತೆಯ ಕೊರತೆಯಿಂದ ಅಮಾನವೀಯವಾಗಿ ವರ್ತಿಸಿ, ನೋಡುವವರ ಕಣ್ಣಿಗೆ ಹೀನಾಯವಾಗಿ ಕಾಣುವ ದುರಂತಕ್ಕೆ ಕೆಲವು ಕುಟುಂಬಗಳು ಬಲಿಯಾಗುತ್ತಿವೆ. ತಾವು ತಮ್ಮ ಗೌರವವನ್ನು ಉಳಿಸಿಕೊಳ್ಳುವ ಸಲುವಾಗಿ ತೆಗೆದುಕೊಂಡ ಬಲಿಯಿಂದಾಗಿ ಸ್ವತಃ ತಾವೂ ಬಲಿಯಾಗುವುದು ತಪ್ಪುವುದಿಲ್ಲವೆಂಬ ವೈಚಾರಿಕ ತಿಳಿವಳಿಕೆ ನಮ್ಮದಾಗಬೇಕಿದೆ.

No comments:

Post a Comment