Search This Blog

Thursday 8 May 2014

ಗುರುದೇವ ರವೀಂದ್ರ 
                                                                                                                                     ಪ್ರದೀಪ್ ಮಾಲ್ಗುಡಿ
ದೇವೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯವರ ರವೀಂದ್ರನಾಥ ಠಾಗೋರ್ ಅವರು ೦೭/೦೫/೧೮೬೧ ಜನಿಸಿದರು. ಎಂಬತ್ತು ವರ್ಷಗಳ ಸುದೀರ್ಘ ಜೀವನವನ್ನು ನಡೆಸಿದ ಅವರು ೦೭/೦೮/೧೯೪೧ರಂದು ಇಹಲೋಕ ತ್ಯಜಿಸಿದರು. ೧೯೧೩ರಲ್ಲಿ ಇವರು ಜಗತ್ಪ್ರಸಿದ್ಧ ನೋಬಲ್ ಪ್ರಶಸ್ತಿಯನ್ನು ಭಾರತಕ್ಕೆ ಮೊಟ್ಟಮೊದಲು ದೊರಕಿಸಿಕೊಟ್ಟರು. ಕಲೆ, ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಶಿಕ್ಷಣ ಕ್ಷೇತ್ರಗಳಿಗೆ ಸಲ್ಲಿಸಿದ ಅನುಪಮ ಸೇವೆಯಿಂದ ವಿಶ್ವದಾದ್ಯಂತ ಹೆಸರಾಗಿದ್ದಾರೆ. ಇಂದಿಗೂ ಬಂಗಾಳದಲ್ಲಿ ರವೀಂದ್ರ ಸಾಹಿತ್ಯ, ರವೀಂದ್ರ ಸಂಗೀತ, ರವೀಂದ್ರ ಚಿತ್ರಕಲೆ, ರವೀಂದ್ರ ಶಿಕ್ಷಣ, ರವೀಂದ್ರ ಚಿಂತನ ಎಂಬ ಭಿನ್ನ ಕ್ಷೇತ್ರಗಳಿಗೆ ಸೇರಿದ ಶಿಸ್ತುಗಳ ಕುರಿತ ಒಂದಿಲ್ಲೊಂದು ಕಾರ‍್ಯಕ್ರಮಗಳು ನಡೆಯುತ್ತಲೇ ಇರುತ್ತವೆ.
ಇವರು ಭಾರತೀಯ ನವೋದಯ ಸಾಹಿತ್ಯದ ಪ್ರವರ್ತಕರಲ್ಲಿ ಆದ್ಯರು. ಬಹುತೇಕ ಭಾರತೀಯ ಭಾಷೆಗಳ ಮೇಲೆ ಪ್ರಭಾವ ಬೀರುವಷ್ಟು ಪ್ರಖರ ಚಿಂತನೆ ಇವರದಾಗಿತ್ತು. ಅರವಿಂದ, ಮೋಹನದಾಸ್ ಕರಮ್‌ಚಂದ್ ಗಾಂಧಿಯಂತವರ ಜತೆಗೆ ಇಡೀ ಭಾರತದಲ್ಲಿ ಏಕಕಾಲಕ್ಕೆ ಅನೇಕ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡು ಪ್ರಚಲಿತಕ್ಕೆ ಬಂದದ್ದು ಈ ಮೂವರ ಶ್ರೇಷ್ಠತೆಗೆ ಉದಾಹರಣೆಗಳಾಗಿ ಇಂದಿಗೂ  ಅವರಿಗೆ ಅರ್ಪಿತವಾಗಿರುವ, ನೆನೆದಿರುವ, ಅನುವಾದಿಸಿರುವ ಅನೇಕ ಕೃತಿಗಳು ದಾಖಲೆಗಳಾಗಿ ಸಿಗುತ್ತಿವೆ. ಬೇಂದ್ರೆ, ಕುವೆಂಪು ಮೊದಲಾದ ಕನ್ನಡ ನವೋದಯ ಕವಿಗಳು ಠಾಗೋರ್ ಅವರನ್ನು ಕುರಿತ ಕವಿತೆಗಳನ್ನು ರಚಿಸಿದ್ದಾರೆ. ಬೇಂದ್ರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಭಾರತೀಯ ಸಾಂಪ್ರದಾಯಕ ಚೌಕಟ್ಟಿನಿಂದ ಆಚೆ ಬಂದ ಟಾಗೋರ್ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರುಗು ನೀಡಿದವರಲ್ಲಿ ಅಗ್ರಗಣ್ಯರು. ಅವರ ಕಾದಂಬರಿ, ಸಣ್ಣ ಕಥೆ, ಕವನ, ನೃತ್ಯ ರೂಪಕ, ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ಗೀತಾಂಜಲಿ (ಆಧ್ಯಾತ್ಮಕ ಭಾವಗೀತೆಗಳು), ಗೋರ ಮತ್ತು ಘರೇ ಬೈರೆ ಇವರ ಪ್ರಸಿದ್ಧ ಕೃತಿಗಳು. ಅವರ ಕವನ, ಸಣ್ಣ ಕಥೆ, ಮತ್ತು ಕಾದಂಬರಿಗಳ ವಸ್ತು, ತಂತ್ರ, ಆಡು ಮಾತಿನ ಬಳಕೆ, ವಾಸ್ತವಿಕ ನಿರೂಪಣಾ ಕ್ರಮ ಮತ್ತು ತತ್ವಶಾಸ್ತ್ರ ದೃಷ್ಟಿಕೋನಗಳಿಂದ ವಿಭಿನ್ನವಾಗಿವೆ. ಟಾಗೋರ್ ಅವರು ವಿಶ್ವದ ಎರಡು ರಾಷ್ಟ್ರಗಳಿಗೆ ರಾಷ್ಟ್ರಗೀತೆಗಳನ್ನು ರಚಿಸಿದ ವಿಶ್ವದ ಏಕೈಕ ಕವಿ. ’ಜನ ಗಣ ಮನ’ ಭಾರತದ ರಾಷ್ಟ್ರಗೀತೆಯಾದರೆ, ’ಅಮರ್ ಶೋನರ್ ಬಾಂಗ್ಲಾ’ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ.
ಆರಂಭದಲ್ಲಿ ಮನೆಪಾಠ, ನಂತರ ಶಾಲೆ, ಕಾಲೇಜಿನಲ್ಲಿ ಅಭ್ಯಾಸ ಮಾಡಿದರೂ ಅವರಿಗೆ ಈ ಬ್ರಿಟಿಶ್ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆ ಆಸಕ್ತಿಕರವಾಗಿರಲಿಲ್ಲ. ಆದರೂ ವಿದ್ಯಾಭ್ಯಾಸ ಮುಂದುವರಿದು, ತಾಯಿಯ ಮರಣಾನಂತರ ಲಂಡನ್‌ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಠಾಗೋರ್ ಅವರು ಬ್ಯಾರಿಸ್ಟರ್ ಆಗಲಿ ಎಂಬ ಕುಟುಂಬ ಸದಸ್ಯರ ಕನಸು ನನಸಾಗಲಿಲ್ಲ. ಅಲ್ಲಿಂದ ಭಾರತಕ್ಕೆ ಮರಳಿ ರಚಿಸಿದ ‘ವಾಲ್ಮೀಕಿ ಪ್ರತಿಭಾ’, ‘ಕಾಲಮೃಗಯೂ’, ‘ಭಗ್ನ ಹೃದಯ’ ನಾಟಕಗಳು ಭಾರತೀಯ ನಾಟಕ ಪರಂಪರೆಯ ಇತಿಹಾಸದಲ್ಲಿ ದಾಖಲಾದವು.
ಅವರು ತೀವ್ರವಾದ ನೋವುಗಳನ್ನು ಅನುಭವಿಸುತ್ತಿದ್ದ ಅವಧಿಯಲ್ಲಿ ಗೀತಾಂಜಲಿ ಕವನ ಸಂಕಲನವು ಆಂಗ್ಲ ಲೋಕವನ್ನು ಪ್ರವೇಶಿಸಿತು. ೧೯೦೨ರಲ್ಲಿ ಹೆಂಡತಿಯ ಸಾವು, ೧೯೦೫ರಲ್ಲಿ ತಂದೆಯ ಸಾವು, ೧೯೦೭ರಲ್ಲಿ ಮಗ ಸಮೀಂದ್ರ, ಮಗಳು ರೇಣುಕಾಳ ಸಾಲುಸಾಲು ಸಾವುಗಳು ಅವರ ಕಣ್ಣೆದುರೇ ಘಟಿಸಿದವು. ಇದಾದ ನಂತರ ಅವರ ಆರೋಗ್ಯವೂ ಕೆಡುತ್ತಾ ಬಂತು. ಈ ಅವಧಿಯಲ್ಲಿ ಅವರು ರಚಿಸಿದ ’ಗೀತಾಂಜಲಿ’ ಕವನ ಸಂಕಲನವನ್ನು ೧೯೧೨ರ ಹೊತ್ತಿಗೆ ಪೂರ್ಣ ಕವನ ಸಂಕಲನವಾಗಿ ಬಿಡುಗಡೆ ಮಾಡುತ್ತಾರೆ. ೧೯೧೨ರಲ್ಲಿ ತೀವ್ರ ಅನಾರೋಗ್ಯದ ಅವಧಿಯಲ್ಲಿ ಬಂಗಾಳಿ ಭಾಷೆಯಿಂದ ತಮ್ಮ ಕವನಗಳನ್ನು ಇಂಗ್ಲಿಶ್ ಭಾಷೆಗೆ ಅನುವಾದಿಸುತ್ತಾರೆ. ಆ ನಂತರ ಅದು ಇಂಗ್ಲಿಶ್ ರೊಮ್ಯಾಂಟಿಕ್ ಕವಿ ಯೇಟ್ಸ್ ಕೈ ತಲುಪುತ್ತದೆ. ’ಇಡೀ ಪಾಶ್ಚಿಮಾತ್ಯ ಜಗತ್ತು ಠಾಗೋರ್‌ರಂತ ಕವಿಗಾಗಿ ಕಾಯುತ್ತಿದೆ’ ಎಂದು ಅವರು ಈ ಕವಿತೆಗಳನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ’ರವೀಂದ್ರ ಪಡೆದ ಪ್ರಸಿದ್ಧಿಯನ್ನು ಯೂರೋಪಿನಲ್ಲಿ ಯಾವ ಕವಿಯೂ ಪಡೆದಿಲ್ಲ. ಮಾನವ ಕುಲದ ಸಕಲ ಮಹತ್ವಾಕಾಂಕ್ಷೆಗಳೂ ಅವರ ಪ್ರಾರ್ಥನಾ ಗೀತೆಗಳಲ್ಲಿವೆ. ರವೀಂದ್ರರ ಪೂಜ್ಯ ಮನೋಭಾವ, ಸೌಂದರ್ಯ ಪ್ರಜ್ಞೆ, ಲಲಿತ ಲಯಗಾರಿಕೆ, ಅನುವಾದಿಸಲು ಅಸಾಧ್ಯವಾದ ನವಿರಾದ ವರ್ಣನಾ ವೈವಿಧ್ಯತೆ, ನವನವೀನ ಛಂದೋವಿನ್ಯಾಸಗಳು, ಕವಿಯ ಚಿಂತನ ಸ್ತರಗಳು ಶ್ರೇಷ್ಠತಮವಾಗಿದ್ದು, ಕನಸಿನ ಲೋಕವನ್ನು ತೆರೆದಿಡುತ್ತವೆ. ಅವರ ಬರವಣಿಗೆ ಸಮೃದ್ಧವಾಗಿಯೂ, ನವನವೋನ್ಮೇಷಶಾಲಿಯಾಗಿಯೂ, ದಿಟ್ಟತನದ ಭಾವೋದ್ವೇಗದಿಂದ ವಿಸ್ಮಯಕರವಾಗಿಯೂ, ಹೃದಯದಲ್ಲಿ ಸುಂದರ ಸುಮನೋಹರ ಭಾವದಲೆಗಳ ಪ್ರತಿಮೆಗಳನ್ನು ಮೂಡಿಸುತ್ತವೆ. ರವೀಂದ್ರರ ದೈವೀ ಪ್ರೇಮವೂ ತಮ್ಮ ಹೃದಯದಾಳದಲ್ಲಿ ಭೋರ್ಗರೆದು ನಿರಂತರವಾಗಿ ಹೊರಹರಿಯುತ್ತದೆ’ ಎಂದು ಇಂಗ್ಲಿಷ್ ಗೀತಾಂಜಲಿಯ  ಮುನ್ನುಡಿಯಲ್ಲಿ ಠಾಗೋರ್ ಅವರ ಕಾವ್ಯದ ಕಾಳಜಿ, ಮೂಲ ಆಶಯಗಳು, ಅದರ ಆದರ್ಶಗಳನ್ನು ಕುರಿತು ಯೇಟ್ಸ್ ಜಗತ್ಸಾಹಿತ್ಯಕ್ಕೆ ಇವರ ಕೊಡುಗೆಯನ್ನು ಸಾರುತ್ತಾರೆ. ಅದರ ಪರಿಣಾಮದಿಂದ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸುತ್ತದೆ.
ಈ ಕ್ರಿಯೆ ರಾಮಾಯಣ ರಚನೆಯ ಕಾರಣದಂತಿದೆ. ಎರಡು ಕ್ರೌಂಚ ಪಕ್ಷಿಗಳು ಮಿಲನದ ಸಂದರ್ಭದಲ್ಲಿ ಬಾಣಕ್ಕೆ ಗುರಿಯಾಗಿ ಸತ್ತ ಪಕ್ಷಿಯ ಸುತ್ತ ಗಿರಕಿ ಹೊಡೆಯುವಾಗ ಉಂಟಾದ ಶೋಕದಿಂದ ಶ್ಲೋಕ ಹುಟ್ಟಿದಂತೆ ಸ್ವಯಂ ಶೋಕದಿಂದ ಗೀತಾಂಜಲಿ ಕವನ ಸಂಕಲನ ಇಂಗ್ಲಿಶ್‌ಗೆ ಅನುವಾದವಾಗುತ್ತದೆ.
ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸ್ಮೃತಿಯನ್ನು ಉದ್ದೀಪನಗೊಳಿಸುವ ವಿಶಿಷ್ಟ ಕೃತಿಗಳಾಗಿ ಅವರ ಚಿಂತನೆಗಳು ಪ್ರವಾಹದೋಪಾದಿಯಲ್ಲಿ ಹರಿದಿವೆ. ೧೯೧೨ರಲ್ಲಿ ರಚನೆಯಾದ ಗೀತಾಂಜಲಿ ಕವನ ಸಂಕಲನ ರಚನೆಯಾಗಿ ೧೦೨ ವರ್ಷಗಳಾದರೆ, ಆ ಕೃತಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಸಂದು ೧೦೧ ವರ್ಷಗಳಾಗಿವೆ. ಸಾಹಿತ್ಯಕ್ಕಾಗಿಯಾಗಲಿ, ಬೇರಾವುದೇ ಕ್ಷೇತ್ರದ ಸಾಧನೆಗಾಗಿ ಭಾರತೀಯ ಸಂಜಾತನಾಗಿ, ಇಲ್ಲೇ ನೆಲೆಸಿದ ಯಾವೊಬ್ಬ ಭಾರತೀಯರಿಗೂ ಇದುವರೆಗೆ ನೊಬೆಲ್ ಪ್ರಶಸ್ತಿ ಬಂದಿಲ್ಲ. ಹಾಗಾಗಿ ಇಂದಿಗೂ ಭಾರತದ ನೊಬೆಲ್ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿದೆ.
೧೮೮೩ರಲ್ಲಿ ಕಾರವಾರದಲ್ಲಿ ಉದ್ಯೋಗದಲ್ಲಿದ್ದ ಅವರ ಸಹೋದರರನ್ನು ಭೇಟಿಯಾಗಲು ಬರುತ್ತಾರೆ. ಇಲ್ಲಿನ ಪರಿಸರದಿಂದ ಉತ್ತೇಜಿರಾದ ಅವರು ಪ್ರಾಕೃತಿಕ ಪರಿಶೋಧ ಎಂಬ ನಾಟಕವನ್ನು ರಚಿಸುತ್ತಾರೆ. ಇವರ ಭೇಟಿಯ ನೆನಪಿಗಾಗಿ ಕಾರವಾರ ಕಡಲತೀರಕ್ಕೆ ’ರವೀಂದ್ರನಾಥ ಠಾಗೋರ್ ಸಮುದ್ರತೀರ’ವೆಂದು ನಾಮಕಾರಣ ಮಾಡಲಾಗಿದೆ. ೧೯೨೮ರಲ್ಲಿ ಇವರು ಬೆಂಗಳೂರಿಗೂ ಭೇಟಿ ನೀಡಿ ಬಾಲಬ್ರೂಯಿ ಅತಿಥಿಗೃಹದಲ್ಲಿ ತಂಗಿದ್ದರು. ಬೆಂಗಳೂರಿನಲ್ಲಿ ಸುಸಜ್ಜಿತವಾಗಿರುವ ರಂಗಮಂದಿರಕ್ಕೆ ರವೀಂದ್ರ ಕಲಾಕ್ಷೇತ್ರ ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ ಇವರ ಜನಗಣಮನ ರಾಷ್ಟ್ರಗೀತೆಯು ಬ್ರಿಟಿಶ್ ಅಧಿಕಾರಿಯೋರ್ವನನ್ನು ಸ್ತುತಿಸುವ ಗೀತೆಯೆಂಬ ವಿವಾದ ಹುಟ್ಟಿತು. ಇದರ ಜತೆಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಗಿರೀಶ್ ಕಾರ್ನಾಡ್ ಅವರು ’ಅವರೊಬ್ಬ ಶ್ರೇಷ್ಠ ನಾಟಕ ರಚನಕಾರರಾಗಿರಲಿಲ್ಲ. ಅವರು ಶ್ರೇಷ್ಠ ಕವಿಯಾಗಿದ್ದರು. ನಾವೆಲ್ಲ ಅವರ ಕವಿತೆಗಳಿಂದಷ್ಟೇ ಪ್ರಭಾವಿತರಾಗಿದ್ದೆವು. ಅವರು ಶ್ರೇಷ್ಠ ನಾಟಕ ಕೃತಿಗಳನ್ನು ರಚಿಸಲಿಲ್ಲ. ಅವರು ಕಳಪೆ ನಾಟಕಗಳನ್ನು ಬರೆದಿದ್ದಾರೆ. ಈ ವಿಷಯದಲ್ಲಿ ನಾವು ಪ್ರಾಯೋಗಿವಾಗಿರನೇಕು’ ಎಂದು ಅಭಿಪ್ರಾಯಪಟ್ಟರು. ಕೃತಿಯೊಂದರ ಮಹತ್ವ ಏಕವ್ಯಕ್ತಿಯ ಪ್ರತಿಕ್ರಿಯೆಯಿಂದ ನಿರ್ಧಾರಿತವಾಗುವುದಿಲ್ಲ. ಹೀಗೆ ವಿಮರ್ಶೆಗೆ ಒಳಗಾಗುವ ಪೂರ್ವದಲ್ಲೇ ರವೀಂದ್ರರು ಜನಮಾನಸದಲ್ಲಿ ನೆಲೆನಿಂತಹ ಬಹಳ ಕಾಲವಾಗಿದೆ.
ಕನ್ನಡದಲ್ಲಿ ರವೀಂದ್ರರ ನೂರೊಂದು ಕವನಗಳು, ರವೀಂದ್ರ ನಿಬಂಧ ಮಾಲಾ, ಗೀತಾಂಜಲಿಯ ಅನೇಕ ಅನುವಾದಗಳು ಹಾಗೂ ಅವರ ನಾಟಕಗಳ ಕೆಲವು ಅನುವಾದಗಳು ಪ್ರಕಟವಾಗಿವೆ. ಹೆಸರಾಂತ ಅನುವಾದಕರಿಂದ, ಕವಿಗಳು, ಯುವಕರೂ ರವೀಂದ್ರ ಅವರ ಕೃತಿಗಳನ್ನು ಇಂದಿಗೂ ಮುಖಾಮುಖಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ೧೫೦ ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಅನೇಕ ಕೃತಿಗಳನ್ನು ಸಾಹಿತ್ಯ, ಸಂಗೀತ, ಚಿತ್ರಕಲೆಯ ವಿವಿಧ ಪ್ರಕಾರಗಳಿಗೆ ಅಳವಡಿಸಿ ದೇಶದಾದ್ಯಂತ ಪ್ರದರ್ಶಿಸುವ, ಪ್ರಯೋಗಿಸುವ ಕೆಲಸಗಳು ನಡೆದವು.

No comments:

Post a Comment