Search This Blog

Monday 28 April 2014

                         ರಾಜರ ಆಸ್ತಿ ಕಬಳಿಕೆಗೆ ನಕಲಿ ದಾಖಲೆಗಳ ಬಳಕೆ 
                                                                                                                                  - ಪ್ರದೀಪ್ ಮಾಲ್ಗುಡಿ
ಮೈಸೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒಡೆಯರ್ ಕುಟುಂಬದ ಎಂಟು ಕೋಟಿ ಆಸ್ತಿ ಕಬಳಿಕೆಯ ಪ್ರಯತ್ನ ನಡೆದಿದೆ. ಬಲಿಷ್ಠರಾದ, ರಾಜಕೀಯವಾಗಿ ಶಕ್ತಿಯಿರುವ, ಪ್ರಸಿದ್ಧರ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಸಂದರ್ಭದಲ್ಲೆ ಹೀಗಾದರೆ ಇನ್ನು ಸಾಮಾನ್ಯ ಜನರ ಆಸ್ತಿಯ ರಕ್ಷಣೆ ಹೇಗೆ ಎಂಬ ಪ್ರಶ್ನೆ ಸದ್ಯಕ್ಕೆ ಎದುರಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ವಿಚಾರಣೆ ಆರಂಭಿಸಿದ್ದಾರೆ. ಇದರಲ್ಲಿ ತಪ್ಪಿತಸ್ತರನ್ನು ಗುರುತಿಸುವ ಕೆಲಸ ನಡೆಯಬಹುದು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕುಟುಂಬಕ್ಕೆ ಸೇರಿದ್ದ ಸುಮಾರು ಎಂಟು ಕೋಟಿ ಮೌಲ್ಯದ ನಿವೇಶನವನ್ನು ನಕಲಿ ದಾಖಲೆ ಮೂಲಕ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುವ ಪ್ರಕರಣ ದುರ್ಬಲರಾಗಿರುವವರಲ್ಲಿ ಸೃಷ್ಟಿಸಿರುವ ಆತಂಕ ಕಡಿಮೆಯಲ್ಲ. ದಿನದಿಂದ ದಿನಕ್ಕೆ ಏರುತ್ತಿರುವ ಭೂಮಿಯ ಬೆಲೆ, ರಿಯಲ್ ಎಸ್ಟೇಟ್ ಲಾಭಿ, ದುರಾಸೆಯ ಲಂಚಕೋರ ಅಧಿಕಾರಿಗಳಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ವಾಸವಾಗಿರುವ ಕುಂಜಪ್ಪ ಎಂಬುಬವರ ಮಗ ಬಿ.ಕೆ.ಸುಂದರ್ (೮೦) ನಕಲಿ ದಾಖಲೆ ಸೃಷ್ಟಿಸಿ, ಒಡೆಯರ್ ವಂಶಸ್ಥರಿಗೆ ಸೇರಿದ ೮.೫ ಕೋಟಿ ಮೌಲ್ಯದ ನಿವೇಶನವನ್ನು ಕಬಳಿಸಿದ್ದ ಸುಂದರ್ ಎನ್ನುವವರ ವಿರುದ್ಧ ವಕೀಲ ಸಿ.ಚಂದ್ರಶೇಖರ್‌ರವರು ಮಾ.೧೫ ರಂದು ಲೋಕಾಯುಕ್ತರಿಗೆ ಸಲ್ಲಿಸಿದ್ದ ದೂರನ್ನು ಆಧರಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ. ಈ ಕೋಟ್ಯಂತರ ರೂಪಾಯಿಗಳ ಹಗರಣದಲ್ಲಿ ಯಾರ‍್ಯಾರು ಪಾಲುದಾರರಾಗಿದ್ದಾರೆ ಎಂಬುದನ್ನು ಕೂಲಂಕಷ ತನಿಖೆಯ ನಂತರ ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದಲ್ಲಿ ಈ ಬಗೆಯ ಹಗಲು ದರೋಡೆಗಳು ಹೆಚ್ಚಾಗುವ ಸಂಭವವಿದೆ.
ಅಲ್ಲದೆ ಇದರಲ್ಲಿ ಪ್ರಭಾವಿಗಳ ಕೈವಾಡವೂ ಇರಬಹುದು. ಏಕೆಂದರೆ, ನಕಲಿ ದಾಖಲೆ ಸೃಷ್ಟಿಯಾಗಿರುವ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು ೨೫ಕೋಟಿ. ಮೈಸೂರು ಪೂರ್ವ ನೋಂದಣಿ ಕಚೇರಿಯ ನೋಂದಣಾಧಿಕಾರಿ ಗಿರೀಶ್ ಅವರ ಮೇಲೆ ಸದ್ಯಕ್ಕೆ ಅನುಮಾನ ಮೂಡಿದೆ. ಕಾರಣವೆಂದರೆ ಅವರು ನೀಡಿರುವ ವ್ಯತಿರಿಕ್ತ ದಾಖಲೆಗಳು. ಇವರು ಉಲ್ಲೇಖಿಸಿದ ದಿನಾಂಕದಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರಿನಲ್ಲಿರಲಿಲ್ಲ. ವಿಚಾರಣೆ ವೇಳೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವಿಷಯಗಳಲ್ಲಿ ಒದಗಿಸಿರುವ ದಾಖಲೆಗಳ ಪರಿಶೀಲನೆಯಿಂದ ಇಲ್ಲಿ ನಡೆದಿರುವ ಅವ್ಯವಹಾರ ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿರುವ ಭೂಕಬಳಿಕೆದಾರರು ಕೇವಲ ಇದೊಂದೆ ಪ್ರಕರಣವನ್ನು ಮಾಡಿರಲಾರರು. ಇದರ ಜತೆಗೆ ಇವರ ಸೂಕ್ತವಾದ ವಿಚಾರಣೆಯಾದಲ್ಲಿ ಪ್ರಾಯಶಃ ಇನ್ನಷ್ಟು ಹಗರಣಗಳು ಬಯಲಾಗಬಹುದು.
ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಕ್ಕೆ ಈ ಪ್ರಕರಣ ಬಯಲಾಗಿದೆ. ಇಲ್ಲವಾಗಿದ್ದರೆ? ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ಜಮೀನು ನಕಲಿ ದಾಖಲೆ ಸೃಷ್ಟಿಸಿದವರ ಪಾಲಾಗುತ್ತಿತ್ತು. ಅದೆ ರೀತಿ ಲೋಕಾಯುಕ್ತ ಸಂಸ್ಥೆಯು ಈ ಪ್ರಕರಣದ ಕುರಿತು ಉದಾಸೀನ ಭಾವನೆ ತಾಳಿದ್ದರೂ ಇದೇ ಮುಂದುವರೆಯುತ್ತಿತ್ತು. ಈ ಎಲ್ಲ ವಿಷಯಗಳನ್ನು ಗಮನಿಸಿ ಲೋಕಾಯುಕ್ತ ಇಲಾಖೆಯೂ ಇನ್ನು ಮುಂದೆ ಬರುವ ದೂರುಗಳನ್ನು ಪರಿಗಣಿಸಿ, ತ್ವರಿತವಾಗಿ ಕ್ರಿಯಾಶೀಲವಾಗಬೇಕಾಗಿದೆ.
ಖಾತೆ ವರ್ಗಾವಣೆಯಾದ ದಿನದಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಅವರು ಮೈಸೂರಿನಲ್ಲಿ ಇರಲೇ ಇಲ್ಲವೆಂದಾದ ಮೇಲೆ ಇಲ್ಲಿ ಅಕ್ರಮ ನಡೆಸಿರುವವರ ಧೈರ್ಯ ಎಷ್ಟಿರಬಹುದೆಂದು ಊಹಿಸಬಹುದು. ಇವರೇನಾದರೂ ಶಿಕ್ಷೆಯಿಂದ ತಪ್ಪಿಸಿಕೊಂಡಲ್ಲಿ ಅಥವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ವಿಫಲವಾದಲ್ಲಿ ಇಂತಹ ಭೂಗಳ್ಳರ ಜಾಲ ಮಹಾನಗರ ಪಾಲಿಕೆಗಳ ವ್ಯಾಪ್ತಿಗಳಲ್ಲಿಯೂ ವಿಸ್ತರಿಸಬಹುದು.

No comments:

Post a Comment