Search This Blog

Monday 28 April 2014

ಚುನಾವಣಾ ಪ್ರಣಾಳಿಕೆ ಯುಗ
                                                                                                                       - ಪ್ರದೀಪ್ ಮಾಲ್ಗುಡಿ
ಎಲ್ಲ ಪಕ್ಷಗಳು ಭರದಿಂದ ಲೋಕಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯ ಕಸರತ್ತನ್ನು ಒಂದು ಹಂತಕ್ಕೆ ಮುಗಿಸಿ ಚುನಾವಣಾ ಪ್ರಣಾಳಿಕೆಗಳತ್ತ ಒತ್ತು ನೀಡತೊಡಗಿವೆ. ಇನ್ನು ಅಧಿಕಾರವನ್ನು ಹಿಡಿಯಲು ಭರವಸೆಗಳ ಮಹಾಪೂರವನ್ನೇ ಹರಿಸಲು ಪ್ರಣಾಳಿಕೆಗಳ ಬಿಡುಗಡೆಯ ಸಮಯವಿದು. ಅನುಷ್ಠಾನಯೋಗ್ಯ ಭರವಸೆಗಳನ್ನಷ್ಟೇ ಘೋಷಿಸಿದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವುದು ಕಷ್ಟವೆಂದು ಭಾವಿಸುವ ರಾಜಕೀಯ ಪಕ್ಷಗಳು; ಈ ಸಂದರ್ಭದಲ್ಲಿ ಭರವಸೆಗಳ ಅತಿವೃಷ್ಟಿಯನ್ನೇ ಸುರಿಸುತ್ತವೆ. ಆದರೆ, ಚುನಾವಣಾ ನಂತರ ಈ ಭರವಸೆಗಳನ್ನು ಘೋಷಿಸಿದವರು ಹಾಗೂ ಕೇಳಿ, ನಂಬಿ ಮತ ಹಾಕಿದವರು ಮತ್ತು ಇವರಿಬ್ಬರ ನಡುವೆ ಸೇತುವೆಯಾಗಿ ಕಾರ‍್ಯನಿರ್ವಹಿಸುತ್ತಿರುವ ಮಾಧ್ಯಮಗಳು ಬಹುತೇಕ ಈ ವಿಷಯಗಳನ್ನು ಮರೆತುಬಿಡುತ್ತವೆ.
ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಘೋಷಿಸಿದ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಯಾವ ಹಂತದಲ್ಲಿ ಜಾರಿಗೆ ತಂದಿದೆ? ಎಂಬ ಪ್ರಶ್ನೆಯನ್ನು ಯಾರಿಗೆ ಕೇಳಬೇಕೆಂಬ ಗೊಂದಲ ಶುರುವಾಗುತ್ತದೆ. ಕರ್ನಾಟಕದಲ್ಲಿ ಸ್ವಚ್ಛ ಆಡಳಿತ - ಸಮರ್ಥ ನಾಯಕತ್ವದ ಘೋಷಣೆಯೊಂದಿಗೆ ಜನಪ್ರಿಯ ಯೋಜನೆಗಳ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿತ್ತು. ಅದರಲ್ಲಿ ಮುಖ್ಯವಾಗಿ ಭ್ರಷ್ಟಾಚಾರದ ವಿರುದ್ಧ ನಿಲುವನ್ನು ಪ್ರತಿಪಾದಿಸಲಾಗಿತ್ತು. ಜತೆಗೆ ಬಿಪಿಎಲ್ ಕುಟುಂಬಗಳಿಗೆ ಕೆ.ಜಿ.ಗೆ ೧ ರೂ.ದರದಲ್ಲಿ ತಿಂಗಳಿಗೆ ೩೦ ಕೆ.ಜಿ ಅಕ್ಕಿ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೪ ರೂ. ಸಬ್ಸಿಡಿ, ೨ ಲಕ್ಷ ರೂಪಾಯಿಗಳವರೆಗಿನ ಕೃಷಿ ಸಾಲದ ಬಡ್ಡಿಗೆ  ವಿನಾಯಿತಿ, ಪಿಯುಸಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಡಿಜಿಟಲ್ ನೋಟ್‌ಬುಕ್, ಕಾವೇರಿ, ಕೃಷ್ಣಾ ಕೊಳ್ಳದ ಎಲ್ಲ ನೀರಾವರಿ ಯೋಜನೆಗಳನ್ನು ೫ ವರ್ಷದಲ್ಲಿ ಅನುಷ್ಠಾನಗೊಳಿಸಲು ವಾರ್ಷಿಕ ೧೦ ಸಾವಿರ ಕೋಟಿ ರೂಪಾಯಿಗಳ ಮೀಸಲು, ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಕರ‍್ಯ ಒದಗಿಸುವ ಯೋಜನೆ, ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ಆಯೋಗ ರಚಿಸಿ ೧,೫೦೦ ಕೋಟಿ ರೂ. ಒದಗಿಸುವ ಭರವಸೆ, ಪಕೃತಿ ವಿಕೋಪ ಪರಿಹಾರಕ್ಕೆ ೧,೫೦೦ ಕೋಟಿ ರೂ. ನಿಧಿ ಸ್ಥಾಪನೆಯ ಭರವಸೆ, ಬೀದರ್‌ನಿಂದ ಚಾಮರಾಜನಗರದವರೆಗೆ ಅಷ್ಟ ಪಥದ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಯೋಜನೆ, ವಸತಿ ಯೋಜನೆಗಳ  ಸಾಲಗಳನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುವುದು, ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚದಿರುವುದು, ಭಯೋತ್ಪಾದನೆ, ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕೆ ಶೀಘ್ರ ನ್ಯಾಯಾಲಯ ಸ್ಥಾಪನೆ, ಬಿಬಿಎಂಪಿಗೆ ವಿಶೇಷ ಕಾನೂನು, ಗ್ರೇಟರ್ ಬೆಂಗಳೂರು ರಚನೆ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳಾಗಿದ್ದವು. ಇವುಗಳಲ್ಲಿ ಕೆಲವನ್ನು ಸಿ.ಎಂ. ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ದಿನದಂದೆ ಘೋಷಣೆ ಮಾಡಿದ್ದರು.
ಆದರೆ ನಂತರ ನಡೆದ ಕೆಲವು ವಿದ್ಯಮಾನಗಳು ಈ ಪ್ರಣಾಳಿಕೆಯ ಮುಖ್ಯ ಕಾರ‍್ಯಸೂಚಿಯಾದ ಸ್ವಚ್ಛ ಆಡಳಿತ - ಸಮರ್ಥ ನಾಯಕತ್ವದ ಭರವಸೆಯನ್ನು ಉಲ್ಲಂಘಿಸಿವೆ. ಲೋಕಸಭಾ ಚುನಾವಣೆಯನ್ನು ಎದುರಿಸುವ ಸಲುವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮಂತ್ರಿ ಮಾಡಲೇಬೇಕಾದ ಅನಿವಾರ‍್ಯತೆಯನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೃಷ್ಟಿಸಿತು. ಇವರ ವಿರುದ್ಧ ಇರುವ ಆಪಾದನೆಗಳನ್ನು ಕುರಿತಂತೆ ಸಾಮಾಜಿಕ ಕಾರ‍್ಯಕರ್ತರು ಬಿಡುಗಡೆ ಮಾಡಿದ ಸಾಕ್ಷಿಗಳಿಗೂ ಮಾನ್ಯತೆ ಸಿಗಲಿಲ್ಲ. ಇದರೊಂದಿಗೆ  ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಸಿ.ಎಂ. ಸಿದ್ದರಾಮಯ್ಯನವರ ಸರ್ಕಾರವಲ್ಲ; ಕಾಂಗ್ರೆಸ್ ಸರ್ಕಾರ ಎಂಬುದು ಸಾಬೀತಾಯಿತು.
ಇದೀಗ ಪ್ರಣಾಳಿಕೆ ಬಿಡುಗಡೆಯಲ್ಲಿ ಎಲ್ಲ ಪಕ್ಷದವರಿಗಿಂಥ ಒಂದು ಹೆಜ್ಜೆ ಮುಂದಿರುವ ಕಾಂಗ್ರೆಸ್ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ೨೦೦೯ರ ಪ್ರಣಾಳಿಕೆಯಲ್ಲಿ ಘೋಷಿಸಿದ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜಾರಿ, ಯುವಕರಿಗೆ ಆಡಳಿತದಲ್ಲಿ ಭಾಗಿಯಾಗುವ ಅವಕಾಶ ಇತ್ಯಾದಿಗಳನ್ನು ಘೋಷಿಸಿತ್ತು. ಅದರ ನಡುವೆ ಆಧಾರ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿತು. ಅದಕ್ಕಾಗಿ ಸಾಫ್ಟ್‌ವೇರ್ ಉದ್ಯಮದ ನಂದನ್ ನಿಲೇಕಣಿಯವರನ್ನು ಈ ಯೋಜನೆಯ ಅಧ್ಯಕ್ಷರನ್ನಾಗಿಸಿತು. ಈಗವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಎದ್ದುಕಾಣುವ ಅಂಶವೆಂದರೆ, ಕಾಂಗ್ರೆಸ್ ಏನನ್ನೂ ಚುನಾವಣಾ ದೃಷ್ಟಿಕೋನವಿಲ್ಲದೆ ಯೋಜಿಸುತ್ತಿಲ್ಲವೆಂಬುದು. ರಾಷ್ಟ್ರವನ್ನು ವಿದೇಶಿ ಶಕ್ತಿಗಳಿಂದ ಬಿಡುಗಡೆಗೊಳಿಸುವ ಸಲುವಾಗಿ ಹುಟ್ಟಿದ ಸಂಸ್ಥೆಯೊಂದು ಹೀಗೆ ಸ್ವಾರ್ಥಪರವಾಗಿ ಚಿಂತಿಸುತ್ತಿರುವುದು ಸರಿಯಲ್ಲ.
ಆದರೆ ಈ ಜನೋಪಯೋಗಿ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಲೋಪವಾಗಿದೆ. ಕಾಮನ್ವೆಲ್ತ್ ಹಗರಣ, ೨ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಗರಣಗಳ ಮಸಿಯನ್ನು ಸ್ವತಃ ಕಾಂಗ್ರೆಸ್ ಮೆತ್ತಿಕೊಂಡಿತು. ೨೦೦೯ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ ದೇಶಾದ್ಯಂತ ಹಳ್ಳಿಗಳನ್ನೂ ಒಳಗೊಂಡಂತೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುವ ಗುರಿಯನ್ನು ಇನ್ನೂ ಈಡೇರಿಸಲಾಗಿಲ್ಲ. ಅದರ ಬದಲಾಗಿ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಇತಿಹಾಸದಲ್ಲಿ ಕೇಳರಿಯದಷ್ಟು ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇನ್ನು ಕೂಲಿಗಾಗಿ ಕಾಳು ಯೋಜನೆ, ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ತಲುಪಬೇಕಾದ ಮೊತ್ತವನ್ನು ದಲ್ಲಾಳಿಗಳು ನುಂಗುತ್ತಿರುವ ಸುದ್ದಿ ಹೊಸದೇನಲ್ಲ. ಗುಡಿ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡುವುದಾಗಿ ಘೋಷಿಸಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿಯನ್ನು ನೀಡಲಾಯಿತು. ಇದು ದೇಶದ ಚಿಲ್ಲರೆ ಮಾರಾಟಗಾರರು, ಸಣ್ಣ ವ್ಯಾಪಾರಸ್ಥರು, ಗುಡಿ ಕೈಗಾರಿಕೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಲಕ್ಷಾಂತರ ಜನರು ಮತ್ತು ಅವರನ್ನು ಅವಲಂಬಿಸಿದ್ದ ಕುಟುಂಬಗಳ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ದೀರ್ಘಾವಧಿಯಲ್ಲಿ ಉಂಟುಮಾಡಲಿದೆ. ಆರ್ಥಿಕ ಶಿಸ್ತಿನ ಕುರಿತು ಮಾಡಿದ್ದ ಘೋಷಣೆಯು ಸುಳ್ಳಾಗಿ ದೇಶದ ಜಿಡಿಪಿ ಅಭಿವೃದ್ಧಿ ದರ ೪.೭ಕ್ಕೆ ಕುಸಿದಿದೆ. ಮಹತ್ವದ ಯೋಜನೆಗಳನ್ನು ಕೇವಲ ಪ್ರಣಾಳಿಕೆಯಲ್ಲಿ ಘೋಷಿಸುವಷ್ಟಕ್ಕೆ ರಾಜಕೀಯ ಪಕ್ಷಗಳು ಸೀಮಿತವಾಗುತ್ತಿವೆ.
ಈಗ ಬಿಡುಗಡೆಯಾಗಿರುವ ೨೦೧೪ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖವಾಗಿ ೧) ಮುಂದಿನ ೫ ವರ್ಷಗಳಲ್ಲಿ ೧೦ ಕೋಟಿಗೂ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ ೨) ೮೦ ಕೋಟಿ ಜನರನ್ನು ಮಧ್ಯಮ ವರ್ಗಕ್ಕೆ ತರುವುದು ೩) ಶೇ.೮ಕ್ಕೂ ಹೆಚ್ಚು ಬೆಳವಣಿಗೆ ದರವನ್ನು ಸಾಧಿಸುವ ಗುರಿ ೪) ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ೫)ಸರಕು ಮತ್ತು ಸೇವಾ ತೆರಿಗೆ ವಿಧೇಯಕ, ನೇರ ತೆರಿಗೆ ಸಂಹಿತೆ ವಿಧೇಯಕ ಜಾರಿ, ೬) ಆರೋಗ್ಯ, ವಸತಿ ಹಕ್ಕು: ಉಚಿತ ಔಷಧ ಸೇರಿ ಗುಣಮಟ್ಟದ ಆರೋಗ್ಯ ಸೇವೆಗೆ ಯೋಜನೆ. ಎಲ್ಲರಿಗೂ ಸೂರು ಕಲ್ಪಿಸಲು ವಿಶೇಷ ಕಾರ್ಯಕ್ರಮ ೭) ನಿಶ್ಚಿತ ಪಿಂಚಣಿ ಯೋಜನೆ: ವೃದ್ಧರು ಹಾಗೂ ಅಂಗವಿಕಲರಿಗೆ ನಿಶ್ಚಿತವಾದ ಮಾಸಿಕ ಪಿಂಚಣಿ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಕ್ರಮ ೮) ಬಡವರು, ಖಾಸಗಿ ಮೀಸಲು: ಖಾಸಗಿ ಕ್ಷೇತ್ರದಲ್ಲಿ ಔದ್ಯೋಗಿಕ ಮೀಸಲಾತಿಗೆ ಯತ್ನ, ಎಲ್ಲಾ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸುವ ಭರವಸೆ ಇತ್ಯಾದಿ ಹತ್ತು ಹಲವು ಭರವಸೆಗಳನ್ನು ಈ ಬಾರಿ ಕಾಂಗೆಸ್ ಘೋಷಿಸಿದೆ. ಇದರಲ್ಲಿ ಅಧಿಕಾರಕ್ಕೆ ಬಂದಲ್ಲಿ ಏನನ್ನು ಮಾಡುತ್ತದದೆಂದು ಕಾದು ನೋಡಬೇಕಾಗಿದೆ.



No comments:

Post a Comment