Search This Blog

Monday 28 April 2014

                       ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ
                                                                                                                          - ಪ್ರದೀಪ್ ಮಾಲ್ಗುಡಿ
ಕ್ರೀಡಾಕ್ಷೇತ್ರವನ್ನು ರಾಜಕೀಯ ಮುಕ್ತಗೊಳಿಸಬೇಕೆಂಬ ವಾದವನ್ನು ಇದುವರೆಗೆ ಪುರಸ್ಕರಿಸಲಾಗಿಲ್ಲ. ಕ್ರೀಡಾಪಟುಗಳ ಆಯ್ಕೆಯಲ್ಲಿ ಕೂಡ ಈ ತಾರತಮ್ಯವನ್ನು ಜಾರಿಗೊಳಿಸಲಾಗಿದೆ. ಅದರ ಜತೆಗೆ ಕ್ರೀಡೆಗಳು ಈಚೆಗೆ ಕ್ರೀಡಾಮನೋಭಾವನೆಯ ಕಾರಣದ ಬದಲು ಹಗರಣದ ಕಾರಣಕ್ಕೆ ಭಾರಿ ಸುದ್ದಿಯಲ್ಲಿವೆ. ೨೦೧೩ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದೆ. ಎನ್.ಶ್ರೀನಿವಾಸನ್ ಅವರು ಕ್ರೀಡಾ ಸಂಘಟಕರಾಗಿದ್ದರು. ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಬಿ.ಸಿ.ಸಿ.ಐ.ನ ಕಾರ‍್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ನಂತರ ಈಗ ಅಧ್ಯಕ್ಷರಾಗಿದ್ದರೆ. ಇದರ ಜತೆಗೆ ಐ.ಸಿ.ಸಿ. ಮುಖ್ಯಸ್ಥರ ಸ್ಥಾನವನ್ನೂ ಅಲಂಕರಿಸಿದ್ದರು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹುಟ್ಟುಹಾಕಿದರು. ಇದರ ನಂತರ ನಡದ ಘಟನಾವಳಿಗಳು ಈಗ ಭಾರತೀಯ ಕ್ರಿಕೆಟ್‌ನ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ಫ್ರಾಂಚೈಸಿಯಲ್ಲಿ ನಿಯಮಬಾಹಿರವಾಗಿ ವರ್ತಿಸಿರುವ ಹಾಗೂ ಮ್ಯಾಚ್‌ಫಿಕ್ಸಿಂಗ್ ಹಗರಣದ ವಿಚಾರಣೆಯ ಸಮಯದಲ್ಲಿ ಇವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಧ್ವನಿ ಕೇಳಿಬರುವ ಮೂಲಕ ಎನ್.ಶ್ರೀನಿವಾಸ್ ಅವರ ಸದ್ಯದ ಸ್ಥಾನಕ್ಕೆ ಕುತ್ತು ಬಂತೆಂದು ಎಲ್ಲರು ಬಗೆದಿದ್ದರು. ಆದರೆ ಪಟ್ಟುಬಿಡದ ಇವರು ತಮ್ಮ ಸ್ಥಾನದಲ್ಲಿ ಯಥಾಪ್ರಕಾರ ಮುಂದುವರೆದಿದ್ದರು. ಈಗ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಕಾರಣದಿಂದಾಗಿ ರಾಜೀನಾಮೆಯನ್ನು ಸಲ್ಲಿಸಲೇಬೇಕಾಗಿದೆ.
೨೦೧೦ರ ಕಾಮನ್ವೆಲ್ತ್ ಗೇಮ್ಸ್‌ನ ಹಗರಣ ದೇಶದ ಕ್ರೀಡಾಸಂಘಟನೆಯ ಮೇಲೆ ಕರಿನೆರಳು ಆವರಿಸುವಂತೆ ಮಾಡಿತು. ನೆರೆಯ ರಾಷ್ಟ್ರ ಚೀನಾ ಒಲಿಂಪಿಕ್ಸ್ ಗೇಮ್ಸ್‌ಗಳನ್ನು ಯಶಸ್ವಿಯಾಗಿ ಸಂಘಟಿಸಿ ಸೈ ಎನ್ನಿಸಿಕೊಂಡಿದೆ. ಆದರೆ ಕಾಮನ್ವೆಲ್ತ್ ಗೇಮ್ಸ್ ಹಗರಣದ ಕೆಸರು ಭಾರತಕ್ಕೆ ಮೆತ್ತಿಕೊಂಡಿದೆ. ಮೂರು ಬಾರಿ ಲೋಕಸಭಾ ಮತ್ತು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿರುವ ಸುರೇಶ್ ಕಲ್ಮಾಡಿ ರಾಷ್ಟ್ರೀಯ ಕಾಂಗ್ರೆಸ್‌ನ ಸಕ್ರಿಯ ರಾಜಕಾರಣಿ ಹಾಗೂ ಕ್ರೀಡಾ ಸಂಘಟಕ. ಇವರು ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈಲ್ವೇಖಾತೆ ರಾಜ್ಯಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಈಗ ಅದರಿಂದ ಅಮಾನತುಗೊಂಡಿದ್ದಾರೆ.
ಈ ಹಗರಣವು ವಿಶ್ವಮಟ್ಟದಲ್ಲಿ ದೇಶದ ಹೆಸರನ್ನು ಹಾಳು ಮಾಡಿದೆ. ಅಲ್ಲದೆ ದೇಶದ ಅಂತರಾಷ್ಟ್ರೀಯ ಕ್ರೀಡಾಸಂಘಟನೆಯ ಸಾಧ್ಯತೆಗಳನ್ನು ಮಸುಕು ಮಾಡಿದೆ. ಇದರ ಕುರಿತು ಕೆಲವು ಗಂಭೀರ ಆರೋಪಗಳು ಎದುರಾದವು. ಅನವಶ್ಯಕವಾದ ವೆಚ್ಚ, ದೆಹಲಿಯ ಕೊಳೆಗೇರಿಗಳಲ್ಲಿದ್ದ ನಾಲ್ಕು ಲಕ್ಷ ಜನರನ್ನು ಗುಳೆ ಎಬ್ಬಿಸಿದ ಪ್ರಕರಣ, ಕಾರ್ಮಿಕ ಕಾನೂನಿನ ಉಲ್ಲಂಘನೆ(ವೇತನ ತಾರತಮ್ಯ, ವೇತನವನ್ನು ಸರಿಯಾಗಿ ಪಾವತಿಸದಿರುವುದು), ಬಾಲಕಾರ್ಮಿಕರ ಬಳಕೆ, ನಗರೀಕರಣ ಪ್ರಕ್ರಿಯೆ ಈ ಅವಧಿಯಲ್ಲಿ ನಡೆದಿದೆ(ಕೊಳೆಗೇರಿಗಳ ನಿರ್ಮೂಲನೆ, ಐಷಾರಾಮಿತನದ ಹಿಂದೆ ಬಿದ್ದು ಕಾಮನ್ವೆಲ್ತ್ ಕ್ರೀಡಾಪಟುಗಳ ವಾಸ್ತವ್ಯ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಮೂಲನಿವಾಸಿಗಳನ್ನು ಒಕ್ಕಲೆಬ್ಬೆಸಿದ ಪ್ರಕರಣ), ಲೈಂಗಿಕ ಹಗರಣ(ಬಡ ಹೆಣ್ಣುಮಕ್ಕಳನ್ನು ಕ್ರೀಡಾಪಟುಗಳ ಲೈಂಗಿಕ ತೃಪ್ತಿಗಾಗಿ ಬಳಸಿಕೊಂಡಿರುವ ಆರೋಪ), ಅದಕ್ಷ ಟೆಂಡರ್‌ದಾರರಿಗೆ ಹೆಚ್ಚಿನ ಮೊತ್ತಕ್ಕೆ ಕೆಲಸಗಳನ್ನು ವಹಿಸಲಾಗಿದೆ. ಆದರೆ ನಿರ್ವಹಿಸಿದ ಕಾಮಗಾರಿಯ ಮಟ್ಟ ಕಳಪೆ ಗುಣಮಟ್ಟದ್ದಾಗಿದೆ, ಸಿದ್ಧತೆಯ ಕೊರತೆ, ಟಿಕೆಟ್ ಮಾರಾಟ ವ್ಯವಸ್ಥೆಯಲ್ಲಿನ ಕಳಪೆ ನಿರ್ವಹಣೆ, ಅದರಿಂದ ಕಡಿಮೆ ಪ್ರೇಕ್ಷಕರ ಆಗಮನ, ವಾಸ್ತವ್ಯ ವ್ಯವಸ್ಥೆಯಲ್ಲಿ ವರ್ಣ ತಾರತಮ್ಯದ ಆಪಾದನೆ, ಸುರಕ್ಷತಾ ಕ್ರಮಗಳ ಕೊರತೆ, ಬಹಿಷ್ಕಾರಕ್ಕೆ ಕರೆ ನೀಡಿದ ಆಟಗಾರರು ಇವೆಲ್ಲದರ ಜತೆಗೆ ಭ್ರಷ್ಟಾಚಾರದ ಆಪಾದನೆ ಎದುರಾದವು.
ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿ.ಸಿ.ಸಿ.ಐ.ನ ಮಾಜಿ ಅಧ್ಯಕ್ಷರು, ಕೃಷಿ ಸಚಿವರೂ ಆದ ಶರದ್ ಪವಾರ್ ಅವರ ಕತೆ ಮತ್ತೊಂದು ರೀತಿಯಿದೆ. ಇವರು ಕೃಷಿ ಸಚಿವರಾದ ಸಮಯದಲ್ಲಿ ವರ್ಷಕ್ಕೆ ೧೫೦೦೦ ಸಾವಿರ ಜನರಂತೆ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ಕುರಿತು ಪ್ರಶ್ನಿಸಿದಾಗ ಅದು ಸಾಮಾನ್ಯ ಸಂಗತಿ ಎಂದು ಉತ್ತರಿಸಿದ್ದರು. ಹೀಗೆ ಆತ್ಮಹತ್ಯೆಗಳು ಸಂಭವಿಸುತ್ತಿರುವ ಸಮಯದಲ್ಲಿ ಇವರು ವಿದೇಶದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಇವರು ಬಿ.ಸಿ.ಸಿ.ಐ.ನ ಅಧ್ಯಕ್ಷರಾಗುವುದಕ್ಕೆ ಕಾರಣ ಯು.ಪಿ.ಎ. ಸರ್ಕಾರಕ್ಕೆ ಅವರು ನೀಡಿದ ಬೆಂಬಲ. ಇವರನ್ನು ತಮ್ಮ ಸ್ವಾರ್ಥಕ್ಕಾಗಿ ಬೆಂಬಲಿಸಬೇಕಾಗಿ ಬಂತು. ಇವರ ಬೆಂಬಲವಿಲ್ಲದಿದ್ದರೆ ಯು.ಪಿ.ಎ. ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿತ್ತು. ಅದರ ಪರಿಣಾಮದಿಂದಾಗಿ ಇವರನ್ನು ಅನಿವಾರ‍್ಯ ಕಾರಣದಿಂದ ಗೆಲ್ಲಿಸಬೇಕಾಯಿತು. ಇಲ್ಲವಾದಲ್ಲಿ ಇವರು ಇದರ ಅಧ್ಯಕ್ಷರಾಗುತ್ತಿರಲಿಲ್ಲ.  
  ಎಲ್ಲರಿಗೂ ಬಿ.ಸಿ.ಸಿ.ಐ.ನ ಮೇಲೆ ಕಣ್ಣು ಬೀಳಲು ಒಂದು ಪ್ರಮುಖ ಕಾರಣವಿದೆ. ಅದೆಂದರೆ, ಬಿ.ಸಿ.ಸಿ.ಐ.ನ ಆರ್ಥಿಕ ಉತ್ಪನ್ನ. ವರ್ಷಕ್ಕೆ  <hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/Iಟಿಜiಚಿಟಿ_ಡಿuಠಿee> ೮.೬೮ ಶತಕೋಟಿಯಷ್ಟು ಆದಾಯವಿರುವ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಇದರ ಮೇಲೆ ಎಲ್ಲರ ಕಣ್ಣು ಸಹಜವಾಗಿ ಬೀಳುತ್ತಿದೆ ಇದರಿಂದಾಗಿ ನಿರಂತರವಾಗಿ ಆಟಗಾರರ ಆಯ್ಕೆ, ನಿವೃತ್ತಿ ಇತ್ಯಾದಿಗಳನ್ನು ಇದು ನಿರ್ಧರಿಸುವಂತಾಗಿದೆ. ಒಂದು ಹಂತದಲ್ಲಿ ಐ.ಸಿ.ಸಿ.ಗೆ ಪ್ರತಿಸ್ಪರ್ಧೆ ನೀಡುವಷ್ಟು ಇದು ಪ್ರಬಲವಾಗಿದೆ.
ಮೇಲಿನ ಮೂರು ವಿಷಯಗಳನ್ನು ಪ್ರಸ್ತಾಪಿಸಿದ ಉದ್ದೇಶವಿಷ್ಟೆ, ಎನ್.ಶ್ರೀನಿವಾಸ್, ಸುರೇಶ್ ಕಲ್ಮಾಡಿ, ಶರದ್ ಪವಾರ್ ಅವರ ಅವಧಿಯಲ್ಲಿ ಭಾರತದ ಕ್ರೀಡಾವಲಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅದರಲ್ಲು ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಅದರ ಪರಿಣಾಮದಿಂದಾಗಿ ಪ್ರತಿ ಹಂತದಲ್ಲೂ ಕೋರ್ಟ್‌ಗಳು ಮಧ್ಯಪ್ರವೇಶ ಮಾಡಬೇಕಾದ ಅನಿವಾರ‍್ಯ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರಿಹಾರವೆ ಇಲ್ಲದಂತಹ ವಾತಾವರಣವನ್ನು ರಾಜಕೀಯ ಒತ್ತಡ ಎದುರಾಗಿದೆ. ಹೀಗಾದರೆ ಕ್ರೀಡಾಕ್ಷೇತ್ರದ ಪಾವಿತ್ರ್ಯತೆ ಎಲ್ಲಿ ಉಳಿಯುತ್ತದೆ?

No comments:

Post a Comment