Search This Blog

Monday 28 April 2014

              ಕೇಜ್ರಿವಾಲ್ ಮೇಲೆ ಮೊಟ್ಟೆ, ಮಸಿ ಯಾಕೆ? 
                                                                                              ಪ್ರದೀಪ್ ಮಾಲ್ಗುಡಿ
ಕರ್ನಾಟಕದಲ್ಲಿ ಕನ್ನಡ ಚಳುವಳಿಗಾರರು ಒಮ್ಮೆ ಎಂ.ಇ.ಎಸ್.ನ ಮೋರೆಯವರ ಮುಖಕ್ಕೆ ಮಸಿ ಬಳಿದಿದ್ದರು. ಆಗ ಚಿಂತಕ ಪೂರ್ಣಚಂದ್ರ ತೇಜಸ್ವಿಯವರನ್ನು ಈ ಕುರಿತು ಪ್ರಶ್ನಿಸಿದಾಗ ’ಕರ್ನಾಟಕದಲ್ಲಿದ್ದು ಕನ್ನಡದ ವಿರುದ್ಧ ಮಾತಾಡುವವರಿಗೆ ಫೇರ್ ಅಂಡ್ ಲವ್ಲಿ ಹಚ್ಚೋಕಾಗುತ್ತೇನ್ರೀ?’ ಎಂದು ಕೇಳಿ ಪ್ರಶ್ನಿಸಿದವರನ್ನೇ ತಬ್ಬಿಬ್ಬು ಮಾಡಿದ್ದರು.
ಪ್ರಮೋದ್ ಮುತಾಲಿಕ್‌ರವರ ಮೇಲೊಮ್ಮೆ ಇದೇ ರೀತಿ ಮಸಿ ದಾಳಿ ನಡೆದಿತ್ತು. ಮಾರ್ಚ್ ೪/೨೦೧೪ರಂದು ಸಹಾರಾ ಮುಖ್ಯಸ್ಥರ ಮೇಲೆ ಇಂಕ್ ಅನ್ನು ಒಬ್ಬ ನ್ಯಾಯವಾದಿ ಎಸೆದಿದ್ದ. ಮಾರ್ಚ್ ೮/೨೦೧೪ರಂದು ಜಂತರ್ ಮಂತರ್‌ನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಆಪ್ ಮುಖಂಡ ಯೋಗೇಂದ್ರ ಯಾದವ್ ಅವರ ಮೇಲೆ ಇಂಕ್‌ನ ಬಾಣ ದಾಳಿ ನಡೆದಿತ್ತು. ಈ ಹಿಂದೆ ಬಾಬಾ ರಾಂದೇವ್ ಅವರ ಮೇಲೂ ಹೀಗೆ ಇಂಕಾಸ್ತ್ರ ಪ್ರಯೋಗವಾಗಿತ್ತು. ಅದಲ್ಲದೆ ಇತ್ತೀಚೆಗೆ ಗಣ್ಯವ್ಯಕ್ತಿಗಳ ಮೇಲೆ ಶೂಬಾಣಗಳು ಹಾರಾಡತೊಡಗಿವೆ. ಇವರೇನು ಇವುಗಳನ್ನು ಪನ್ನೀರು, ಪುಷ್ಟಗಳಿಗೆ ಪರ‍್ಯಾಯವೆಂದು ಪರಿಗಣಿಸಿದ್ದಾರೋ ಏನೋ!
ಮೇಲಿನ ಉದಾಹರಣೆಗಳು ವೈಯಕ್ತಿಕವಾಗಿ ಆ ವ್ಯಕ್ತಿಯ ಮೇಲೆ ಇರುವ ಅಸಹನೆಯನ್ನು ತೋರಿಸುತ್ತದೆ. ಆದರೆ ಮಾರ್ಚ್ ೨೫/೨೦೧೪ರಂದು ವಾರಣಾಸಿಯಲ್ಲಿ ಆಪ್ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ನಡೆದ ಬಿಜೆಪಿ ಕಾರ‍್ಯಕರ್ತರ ಇಂಕ್ ದಾಳಿ ಪ್ರಕರಣವು ರಾಜಕೀಯದ ಭಾಗವಾಗಿದೆ. ಸಾರ್ವಜನಿಕವಾಗಿ ಮಸಿ ಬಳಿಸಿಕೊಂಡವರನ್ನು ಜನ ಹೇಗೆ ಪರಿಭಾವಿಸುತ್ತಾರೆಂಬುದರ ಮೇಲೆ ಇವರ ತಂತ್ರ ಸಫಲವಾಗುತ್ತದೋ ವಿಫಲವಾಗುತ್ತದೋ ಎಂಬುದು ನಿರ್ಧಾರವಾಗುತ್ತದೆ. ಈ ಕ್ರಿಯೆಯ ಮೂಲಕ ಚುನಾವಣಾ ಸಮಯದಲ್ಲಿ ತಮ್ಮ ಪಕ್ಷದ ಎದುರಾಳಿಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸಕ್ಕೆ ಸಂಘಪರಿವಾರದ ಸದಸ್ಯರು ಮುಂದಾಗಿರಬಹುದು.
ಆದರೆ ಆಧುನಿಕ ಸಂದರ್ಭದಲ್ಲಿ ಮಾಧ್ಯಮಗಳು ಸದಾ ಕಣ್ಣು ತೆರೆದು ಕುಳಿತಿರುವ ದೇವರುಗಳಂತೆ (ದೇವರು ಅನಿಮಿಷರು ಎಂಬ ಪ್ರತೀತಿ ಇದೆ) ಕಾಯುತ್ತಿರುತ್ತಾರೆ. ಇಲ್ಲಿ ಈ ಕ್ರಿಯೆಯನ್ನು ನೋಡುವ ಕೋಟಿ ಕಣ್ಣುಗಳು ಕೋಟಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅದು ತಮ್ಮ ಪರವಾದ ನಿಲುವಾಗಿರುವ ಖಾತ್ರಿ ಇಲ್ಲ. ಆದರೆ ಮುಂದಾಲೋಚನೆಯಿಲ್ಲದೆ ಚಿಕ್ಕ ಮಕ್ಕಳಾಟದಂತೆ ಮಸಿಯನ್ನು ಎರಚುವ ಕೆಲಸವನ್ನು ನಿಲ್ಲಿಸಬೇಕಾಗಿದೆ.
ಮಸಿ ಎರಚುವವರ ಮನಸ್ಥಿತಿಯಷ್ಟೇ ಇಲ್ಲಿ ಜಗಜ್ಜಾಹೀರಾಗುತ್ತದೆ. ಹೀಗೆ ಮಸಿ ಬಳಿಯುವ ಮೂಲಕ, ಮಸಿ ಬಳಿಸಿಕೊಂಡವರ ವೈಯಕ್ತಿಕ ಜೀವನದ ಮೇಲೇನು ಇವರು ಮಸಿ ಬಳಿಯಲಾಗುವುದಿಲ್ಲವೆಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ. ಚುನಾವಣಾ ಸಮಯದಲ್ಲಿ ಇಂತಹ ಕೀಳು ಅಭಿರುಚಿಯನ್ನು ಬಳಸಿಕೊಂಡು ತಮ್ಮ ನಂಬಿಕೆಯ ವಿರುದ್ಧವಿರುವ ವ್ಯಕ್ತಿಗಳ ಮುಖಕ್ಕೆ ಬಳಿಯುವ ಮಸಿ, ಕೇವಲ ಬಳಿಸಿಕೊಂಡವರ ಮುಖಕ್ಕೆ ಮಾತ್ರ ಬಳಿದಿದ್ದೇವೆಂದು ತಿಳಿದುಕೊಂಡರೆ ಅದು ತಪ್ಪು. ಹಾಗೆ ಬಳಿದ ಮಸಿ ಬಳಿದವರ ಮುಖಕ್ಕೂ ಮೆತ್ತಿಕೊಂಡಿರುತ್ತದೆ. ಅಲ್ಲದೆ ಇಡೀ ತನ್ನ ದೇಹವನ್ನೆಲ್ಲ ಆ ಮಸಿ ವ್ಯಾಪಿಸಿರುತ್ತದೆ ಎಂಬುದನ್ನು ಮಸಿ ಬಳಿಯುವವರು, ಬಳಿಸುವವರು ಮರೆಯಬಾರದು. ಈ ಲೋಕ ಕನ್ನಡಿ ಇದ್ದ ಹಾಗೆ, ನೀವು ನಕ್ಕರೆ ಅದು ನಗುತ್ತದೆ, ನೀವು ಅತ್ತರೆ ಅದೂ ಅಳುತ್ತದೆ ಅಲ್ಲವೇ?

No comments:

Post a Comment