Search This Blog

Monday 28 April 2014

  ತಂತ್ರಜ್ಞಾನದ ಮಿತಿ
                                                                                                                                   - ಪ್ರದೀಪ್ ಮಾಲ್ಗುಡಿ
ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಕಳೆದು ಹೋದ ವಿಮಾನವೊಂದನ್ನು ಪತ್ತೆಹಚ್ಚಲಾಗುತ್ತಿಲ್ಲ. ಇದುವರೆಗೆ ತನ್ನ ಕಿರುಬೆರಳಲ್ಲಿ ಜಗತ್ತನ್ನು ಆಡಿಸುವ ಪ್ರಯತ್ನಗಳಿಗೆ ತಂತ್ರಜ್ಞಾನವನ್ನು ನಂಬಿಕೊಳ್ಳಲಾಗಿತ್ತು. ತಂತ್ರಜ್ಞಾನ ಆವಿಷ್ಕಾರದ ಕಾರಣಕ್ಕೆ ವಿಶ್ವದ ಮುಂದುವರಿದ ರಾಷ್ಟ್ರಗಳೆಲ್ಲವೂ ವಿಶ್ವವೇ ತಮ್ಮನ್ನು ತಿರುಗಿ ನೋಡುವಂತೆ ಮಾಡಿದ್ದೇವೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದವು. ಆದರೆ ಕಳೆದ ಎರಡು ವಾರಗಳಿಂದ ನಮ್ಮ ತಂತ್ರಜ್ಞಾನದ ಮಿತಿ ಮನವರಿಕೆಯಾಗಿದೆ. ಇಡೀ ವಿಶ್ವವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಮಾನವನ ಪ್ರಯತ್ನಗಳು ನಿರಂತರವಾಗಿ ವಿಫಲವಾಗಿವೆ. ಅದರಂತೆ ಪ್ರಕೃತಿಯನ್ನು ಮಾನವ ತನ್ನ ಹಿಡಿತಲ್ಲಿಟ್ಟುಕೊಳ್ಳುವುದು ಕೂಡ ಸಾಧ್ಯವಾಗುತ್ತಿಲ್ಲ. ತನ್ನ ಈ ಮಿತಿಯನ್ನು ಮೀರುವ ಸಲುವಾಗಿ ಅತಿ ವೇಗದ ವಿಮಾನ, ರೈಲುಗಳನ್ನು, ಯುದ್ಧವಿಮಾನ, ರಾಕೆಟ್‌ಗಳನ್ನು ಕಂಡುಹಿಡಿಯುತ್ತ, ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾಯಿಸುತ್ತ ಜಗತ್ತನ್ನು ಹಳ್ಳಿ ಮಾಡಿಕೊಂಡಿದ್ದೇವೆಂದು ಬೀಗುತ್ತಿದ್ದವರಿಗೆ ಈಗ ಸಂಭವಿಸಿರುವ ಅವಘಡ ಎಚ್ಚರದ ಗಂಟೆಯಾಗಿದೆ.
ತೃತೀಯ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಮುಂದುವರಿದ ರಾಷ್ಟ್ರಗಳು ಕಂಡುಕೊಳ್ಳುತ್ತಿವೆ. ಈ ಹೊತ್ತಿನಲ್ಲಿ ಜೀವ ಉಳಿಸುವ ತಂತ್ರಜ್ಞಾನದ ಆವಿಷ್ಕಾರದ ಅವಶ್ಯಕತೆಯನ್ನು ವಿಮಾನ ನಾಪತ್ತೆ ಪ್ರಕರಣ ಹುಟ್ಟುಹಾಕಿದೆ. ನಾಪತ್ತೆಯಾದ ವಿಮಾನದ ಪತ್ತೆಗೆ ಇಪ್ಪತ್ತೆರಡು ರಾಷ್ಟ್ರಗಳು ಶ್ರಮಿಸಿದರೂ ಇಷ್ಟು ದಿನಗಳ ನಂತರವೂ ಖಚಿತ ಮಾಹಿತಿ ಲಭಿಸದಿರುವುದು ಯಕ್ಷಪ್ರಶ್ನೆಯಾಗಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಉಪಗ್ರಹಗಳು, ದೂರಸಂವೇದಿ ಯಂತ್ರಗಳು ನಾಪತ್ತೆಯಾಗಿರುವ ವಿಮಾನದಲ್ಲಿದ್ದ ಪ್ರಯಾಣಿಕರ ದುಃಖವನ್ನು ತೊಡೆಯುವುದರಲ್ಲಿ ವಿಫಲವಾಗಿವೆ. ನಾಸಾ ಇದುವರೆಗೆ ಹೆಮ್ಮೆ ಪಡುತ್ತಿದ್ದ ಉಪಗ್ರಹಗಳ ಕಣ್ಣಿಂದಲೂ ತಪ್ಪಿಸಿಕೊಂಡಿರುವ ಈ ವಿಮಾನದ ವಿಷಯ ಸದ್ಯಕ್ಕೆ ಚಿದಂಬರ ರಹಸ್ಯವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯುನ್ಮಾನ ಹಾಗು ಮುದ್ರಣ ಮಾಧ್ಯಮಗಳು ದಿನಕ್ಕೊಂದು  ಕತೆ ಕಟ್ಟಿದವು. ಆ ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಗಳ ಮಾನಸಿಕ ಒತ್ತಡವನ್ನು ನಿವಾರಿಸುವ ಬದಲು, ಆತಂಕ ಕ್ಷಣಕ್ಷಣಕ್ಕೂ ಹೆಚ್ಚಿಸುವಂತಹ, ರೋಚಕಗೊಳಿಸಿ ಪ್ರಸಾರಿಸುವ, ಪ್ರಕಟಿಸುವ ಕೆಲಸವನ್ನು ಈ ಮಾಧ್ಯಮಗಳು ಮಾಡಿದವು. ’ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ್ದಾರೆ, ಆ ವಿಮಾನವನ್ನು ಬೆಂಗಳೂರಿನ ಮೇಲೆ ದಾಳಿಗಾಗಿ ಅಪಹರಿಸಲಾಗಿದೆ’ ಇತ್ಯಾದಿ ಕಪೋಲಕಲ್ಪಿತ ವರದಿಗಳು, ಸುದ್ದಿಗಳು ಪ್ರಕಟವಾದವು, ಬಿತ್ತರಗೊಂಡವು. ಇದರಿಂದ ಕೇವಲ ವಿಮಾನ ಪ್ರಯಾಣಿಕರಲ್ಲಿದ್ದ ಆತಂಕ ಬೆಂಗಳೂರಿನಲ್ಲಿದ್ದ ಜನತೆಯ ಜತೆಗೆ ಅಲ್ಲಿರುವ ಒಂದು ಕೋಟಿ ಜನರ ಸಂಬಂಧಿಕರ ಆತಂಕವಾಗಿ ವಿಸ್ತರಿಸಿತು. ಇದು ಇನ್ನೊಂದು ರೀತಿಯಲ್ಲಿ ಭಯೋತ್ಪಾದಕ ಕಾರ‍್ಯವಾಗಿದೆ. ಎಲ್ಲರನ್ನು ವಿಮರ್ಶಿಸುವ ಮಾಧ್ಯಮಗಳು ತಮ್ಮ ಸ್ವವಿಮರ್ಶೆಯ ಕಾಲವನ್ನು ತಲುಪಿರುವಂತಿದೆ.

No comments:

Post a Comment