Search This Blog

Monday 28 April 2014

ಜನ ಪ್ರತಿನಿಧಿಗಳ ಆಸ್ತಿ
                                                                                                                                      - ಪ್ರದೀಪ್ ಮಾಲ್ಗುಡಿ
ಒಂದು ಅಂಕಿ-ಅಂಶದ ಪ್ರಕಾರ ಇಡೀ ಭಾರತದಲ್ಲಿ ಮುವತ್ತು ಕೋಟಿ ಜನಕ್ಕೆ ಎರಡು ಹೊತ್ತಿನ ಊಟವೂ ಸಿಗುತ್ತಿಲ್ಲ. ಪ್ರಾಥಮಿಕ ಶಿಕ್ಷಣವನ್ನೂ ಪಡೆಯದ ಕೋಟಿಗಟ್ಟಲೆ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಅಪೌಷ್ಠಿಕತೆಯಿಂದ ರೋಗಪೀಡಿತರಾಗಿ ನರಳುತ್ತಿರುವ ಮಕ್ಕಳು, ಗರ್ಭಿಣಿಯರ ಸಂಖ್ಯೆ ಕೋಟಿಗಳನ್ನು ಮೀರುತ್ತದೆ. ಸರ್ಕಾರಿ ಉತ್ಪಾದನಾ ವಲಯಗಳು ಒಂದೊಂದಾಗಿ ಕಣ್ಮುಚ್ಚುತ್ತಿವೆ. ಇದರಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗದೆ ಲಕ್ಷಾಂತರ ಪದವೀಧರರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಧುನಿಕೋತ್ತರ ಕಾಲಘಟ್ಟದಲ್ಲಿ ಅನೇಕ ಕ್ಷೇತ್ರಗಳ ಕ್ಷಿಪ್ರ ಬೆಳವಣಿಗೆಯ ಜೊತೆಗೆ ಬಡತನವೂ ಬೆಳೆಯುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿರುವ ಜೊತೆಗೆ ಈ ಬಗೆಯ ಸಮಸ್ಯೆಗಳು ಇಲ್ಲವಾಗುವ ಬದಲು, ಇಮ್ಮಡಿಯಾಗುತ್ತಿವೆ.
ಇದಕ್ಕೆ ವ್ಯತಿರಿಕ್ತವಾಗಿ ಪ್ರಜಾಸೇವೆಗೆಂದು ಆಯ್ಕೆಯಾಗುತ್ತಿರುವ ಜನಪ್ರತಿನಿಧಿಗಳ ಆಸ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಕಾಲಕ್ಕೆ ಮತದಾರರೆ ಸ್ಪರ್ಧಿಗಳ ಚುನಾವಣಾ ವೆಚ್ಚಕ್ಕೆ ಹಣವನ್ನು ದೇಣಿಗೆ ನೀಡುತ್ತಿದ್ದ ಕಾಲವಿತ್ತು. ಆದರೆ ಇಂದು ಸಾವಿರಾರು ಕೋಟಿ ಒಡೆಯರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಇಷ್ಟೊಂದು ಅಪಾರ ಪ್ರಮಾಣದ ಹಣ, ಆಸ್ತಿ ಸಂಪಾದಿಸಿರುವುದು ಹೇಗೆಂಬುದು ಬಿಡಿಸಲಾಗದ ಒಗಟಾಗಿಯೇ ಉಳಿಯುತ್ತಿದೆ. ಜನಪ್ರತಿನಿಧಿಗಳ ನಡೆ ಇನ್ನಾದರೂ ಪ್ರಜೆಗಳ ಅಭಿವೃದ್ಧಿಯ ಕಡೆಗೆ ಚಲಿಸಬೇಕಾಗಿದೆ.

No comments:

Post a Comment