Search This Blog

Monday 28 April 2014

ಮತಬ್ಯಾಂಕ್      
                                                                                                                                       - ಪ್ರದೀಪ್ ಮಾಲ್ಗುಡಿ
ರಾಜಕಾರಣಿಗಳು ಮಠಮಾನ್ಯಗಳನ್ನು ತಮ್ಮ ಮತಬ್ಯಾಂಕ್ ಮಾಡಿಕೊಳ್ಳುತ್ತಿರುವುದು ಹೊಸದೇನಲ್ಲ. ಅದರಲ್ಲೂ ಚುನಾವಣಾ ಸಮಯದಲ್ಲಿ ನಡೆಯುವ ಚುನಾವಣಾ ಪ್ರಚಾರಗಳ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಮಠಗಳು ಹಾಗೂ ಪ್ರಭಾವೀ ಮಠಗಳ ಸ್ವಾಮಿಗಳ ದರ್ಶನ ಪಡೆಯುವುದು ಹಾಗೂ ಅವರ ಕಾಲಿಗೆರಗಿದ ಫೋಟೋಗಳು, ವೀಡಿಯೋಗಳು ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ಆ ಮಠಗಳ ಭಕ್ತರನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯದ ಅನೇಕ ಮಠಗಳಿಗೆ ಕೋಟಿಗಟ್ಟಲೆ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಅದರ ಕುರಿತು ವಿರೋಧಾಭಿಪ್ರಾಯಗಳು ಎದ್ದಿದ್ದವು. ಕೆಲವು ಮಠಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ನಾಟಕದಲ್ಲಿ ಸಾರ್ವರ್ತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ. ಆದರೆ ಹಾಗೆಂದು ಈಗ ಸರ್ಕಾರವು ಮಠಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುವುದು ಸಾರ್ವಜನಿಕ ಹಣದ ದುರುಪಯೋಗವಾಗುತ್ತದೆ. ಹೀಗೆ ಮಠಗಳಿಗೆ ಹಣ ಬಿಡುಗಡೆ ಮಾಡುವ ಕ್ರಿಯೆಯು ಮಠಾಧೀಶರು ಹಾಗೂ ಜನಪ್ರತಿನಿಧಿಗಳ ನಡುವೆ ಒಪ್ಪಂದವೊಂದು ಜಾರಿಯಲ್ಲಿರುವ ಅನುಮಾನವನ್ನು ಮೂಡಿಉವಂತೆ ಇವರಿಬ್ಬರ ನಡೆಯಿದೆ.
ಇದರ ನಡುವೆ ಸಿರಿಗೆರೆಯ ಬೃಹನ್ಮಠದ ಸ್ವಾಮಿಗಳು ತಮ್ಮನ್ನು ನೋಡಲು ಬರುವ ರಾಜಕಾರಣಿಗಳು ಸಾಮಾನ್ಯರಂತೆ ಜನರ ಜೊತೆ ಸರದಿ ಸಾಲಿನಲ್ಲಿ ಬಂದು ಹೋಗಬೇಕು ಹಾಗೂ ತಮ್ಮ ಜೊತೆಗಿರುವ ಫೋಟೋಗಳನ್ನು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಳಸಬಾರದೆಂದು ತಾಕೀತು ಮಾಡಿರುವುದು ಸರಿಯಾದ ಕ್ರಮವಾಗಿದೆ. ಆದರೆ ಇದು ಕೇವಲ ಈ  ಲೋಕಸಭಾ ಚುನಾವಣೆ ಹಾಗೂ ಸಿರಿಗೆರೆ ಮಠಕ್ಕೆ ಮಾತ್ರ ಅನ್ವಯಿಸುವ ಬದಲು, ಎಲ್ಲ ಮಠಾಧೀಶರು ಈ ನಿಲುವನ್ನು ತಳೆಯುವ ಮೂಲಕ ರಾಜಕಾರಣ ಮತ್ತು ಮಠಗಳಿಗಿರುವ ರಾಜಕೀಯ ಸಂಬಂಧಗಳ ನಡುವೆ ಅಂತರ ಕಾಯ್ದುಕೊಳ್ಳಬೇಕಾಗಿದೆ. ಈ ನಿಲುವನ್ನು ಮೊಟ್ಟಮೊದಲು ಸಾರ್ವಜನಿಕವಾಗಿ ಘೋಷಿಸಿದ್ದಕ್ಕಾಗಿ ಸಿರಿಗೆರೆ ಸ್ವಾಮಿಗಳು ಅಭಿನಂದನಾರ್ಹರು.

No comments:

Post a Comment