Search This Blog

Monday 28 April 2014

ಪಶ್ಚಿಮ ಘಟ್ಟ ಉಳಿಯಬೇಕು                                                                                                                                                                                                                                                                   - ಪ್ರದೀಪ್ ಮಾಲ್ಗುಡಿ
ಕರ್ನಾಟಕವನ್ನೂ ಒಳಗೊಂಡ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ವಿಶಾಲವಾಗಿ ಹಬ್ಬಿರುವ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಅಪಾರ ಪ್ರಮಾಣದ ಸಸ್ಯ ಹಾಗೂ ಜೀವವೈವಿಧ್ಯವಿದೆ. ಪರಿಸರ ಸಚಿವಾಲಯದ ಅಧಿಸೂಚನೆಯ ಪ್ರಕಾರ ಇನ್ನು ಮುಂದೆ ಈ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕೆಗಳು, ಅದಿರು ಹಾಗೂ ಕಲ್ಲು ಗಣಿಗಾರಿಕೆ, ಶಾಖೋತ್ಪನ್ನ ಅಣುವಿದ್ಯುತ್ ಸ್ಥಾವರ ಮೊದಲಾದ ಬೃಹತ್ ಕೈಗಾರಿಕಾ ಯೋಜನೆಗಳಿಗೆ ಕಡ್ಡಾಯ ನಿಷೇಧ ಜಾರಿಗೆ ಬರಲಿದೆ.
ವೈಜ್ಞಾನಿಕವಾಗಿ ಶೇ ೩೩ರಷ್ಟು ಕಾಡು ಇದ್ದರೆ ಮಾತ್ರ ಪರಿಸರ ಸಮತೋಲನದಿಂದ ಕೂಡಿರುತ್ತದೆ. ಆದರೆ ಸರ್ಕಾರಿ ವರದಿಗಳ ಪ್ರಕಾರವೇ ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಡಿನ ಪ್ರಮಾಣ ಶೇ ೨೨ರಷ್ಟು ಮಾತ್ರ. ಇದರ ಪ್ರಮಾಣ ಘೋಷಣೆಯಾಗಿರುವುದಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಈಗಾಗಲೇ ಸಾಕಷ್ಟು ಸಸ್ಯ ಹಾಗೂ ಜೀವವೈವಿಧ್ಯಗಳು ವಿನಾಶದ ಅಂಚನ್ನು ದಾಟಿಬಿಟ್ಟಿವೆ. ಉದಾಹರಣೆಗೆ ಜಗತ್ತಿನ ಅತಿ ದೊಡ್ಡ ಸಸ್ತನಿಯಾಗಿದ್ದ ಡೈನೋಸಾರ್‌ಗಳೇ ಇಂದು ತಮ್ಮ ಅಸ್ತಿತ್ವನ್ನು ಕಳೆದುಕೊಂಡಿವೆ. ಇನ್ನು ಕೆಲವು ವಿನಾಶದ ಗಡಿಯನ್ನು ತಲುಪಿವೆ. ಔಷಧೀಯ ಗಿಡಮೂಲಿಕೆಗಳು ಹಾಗೂ ಬೆಲೆಬಾಳುವ  ಮರಗಳು ಇಲ್ಲವಾಗುತ್ತಿವೆ. ಆದ್ದರಿಂದ ಇವುಗಳನ್ನು ಉಳಿಸಬೇಕೆಂದರೆ ಪರಿಸರ ಸಚಿವಾಲಯ ಘೋಷಿಸಿರುವ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಬೃಹತ್ ಕೈಗಾರಿಕೆಗಳಿಗೆ ನಿಷೇಧ ಜಾರಿಗೆ ಬರಬೇಕಾಗಿದೆ.
ಇಲ್ಲಿ ಮಾನವ ಗಮನಿಸಬೇಕಾದ ಒಂದು ಸಂಗತಿಯಿದೆ. ಸ್ವಾರ್ಥಕ್ಕಾಗಿ ನಾವು ಕಾಡನ್ನು ಕಡಿಯುತ್ತ ಜೀವವೈವಿಧ್ಯವನ್ನು ನಾಶ ಮಾಡುತ್ತ ಹೋದಂತೆ, ಒಂದೊಂದಾಗಿ ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಅಳಿಯುತ್ತಿವೆ. ಆದರೆ ಆ ಅಳಿಯುತ್ತಿರುವ ಪಟ್ಟಿಯಲ್ಲಿ ಮಾನವ ಸ್ವತಃ ಕೊನೆಯ ಪಟ್ಟಿಯಲ್ಲಿದ್ದಾನೆ. ಈ ಅಂಶಗಳನ್ನು ವಿವೇಚಿಸಿ ಯಾವುದೇ ಅಂತರರಾಷ್ಟ್ರೀಯ, ರಾಷ್ಟ್ರೀಯ, ಸ್ಥಳೀಯ ರಾಜಕೀಯ ಹಾಗೂ ಉದ್ಯಮ, ಲಂಚದ ಆಮಿಶ, ಲಾಭಿ, ಒತ್ತಡಗಳಿಗೂ ಮಣಿಯದೆ ಇಲ್ಲಿನ ನಿಷೇಧ ಜಾರಿಗೆ ಬರಬೇಕಾಗಿದೆ. ಹಾಗಾದಲ್ಲಿ ಪಶ್ಚಿಮ ಘಟ್ಟಗಳ ಉಳಿವಿನ ಮೂಲಕ ಜೀವವೈವಿಧ್ಯವೂ ಆ ಮೂಲಕ ಮಾನವ ಸಂತತಿಯೂ ಉಳಿಯಲಿದೆ.

No comments:

Post a Comment