Search This Blog

Monday 28 April 2014

ಹಲವು ಕಡೆ ಸ್ಪರ್ಧೆ ಬೇಡ                                               - ಪ್ರದೀಪ್ ಮಾಲ್ಗುಡಿ
ಜನಪ್ರತಿನಿಧಿಗಳಾಗುವ ಬಯಕೆಯುಳ್ಳ ಹಲವು ರಾಜಕಾರಣಿಗಳು ಏಕಕಾಲದಲ್ಲಿ ಹಲವು ಕಡೆ ಸ್ಪರ್ಧಿಸುವುದು ತರವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ಮುಖಂಡರು ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ತಾವು, ಕುಟುಂಬದ ಸದಸ್ಯರು ಹಾಗೂ ತಮ್ಮ ಬೆಂಬಲಿಗರನ್ನು ಅಖಾಡಕ್ಕಿಳಿಸುತ್ತಿರುವುದು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ. ಅಲ್ಲದೇ ಎರಡೂ ಕಡೆ ಗೆದ್ದರೆ ಜನಪ್ರತಿನಿಧಿಗಳ ಈ ನಡೆ  ಒಂದು ಕ್ಷೇತ್ರದಲ್ಲಿ ವಿನಾಕಾರಣ ಮತ್ತೊಮ್ಮೆ ಚುನಾವಣೆಯನ್ನು ಅನವಶ್ಯಕವಾಗಿ ಹೇರುತ್ತದೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ದೇವೇಗೌಡರೂ ಇಂತಹ ಪ್ರಯತ್ನಗಳನ್ನು ಈಗಾಗಲೇ ಮಾಡಿದ್ದಾರೆ. ಜನಪ್ರತಿನಿಧಿಗಳ ಈ ಅಧಿಕಾರ ಲಾಲಸೆ ಮತದಾರರಿಗೂ ಇಷ್ಟವಿಲ್ಲವೆಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.
ಉದಾಹರಣೆಗೆ ಸೋನಿಯಾ ಗಾಂಧಿಯವರು ಅಮೇಥಿ ಹಾಗೂ ಬಳ್ಳಾರಿಯಲ್ಲಿ ಸ್ಪರ್ಧಿಸಿ ಎರಡರಲ್ಲೂ ಜಯಗಳಿಸಿದರು. ಆದರೆ, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು. ಆದರೆ, ಅದರ ನಂತರ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷವು ಹಿಡಿತವನ್ನು ಕಳೆದುಕೊಂಡು, ಇದುವರೆಗೂ ಮತ್ತೆ ಆ ಕ್ಷೇತ್ರದಲ್ಲಿ ಜಯಗಳಿಸಲಾಗಿಲ್ಲ. ಅದಾದ ನಂತರ ಕಾಂಗ್ರೆಸ್ ರಾಜ್ಯದಾದ್ಯಂತ ಬಲಹೀನವಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯಡಿ ಸಲ್ಲಿಕೆಯಾಗಿರುವ ಈ ಸಂಬಂಧದ ಅರ್ಜಿಯನ್ನು ತ್ವರಿತವಾಗಿ ನ್ಯಾಯಾಲಯವು ವಿಲೇವಾರಿ ಮಾಡಿ, ನ್ಯಾಯಮೂರ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ಆ ಮೂಲಕ ಜನಪ್ರತಿನಿಧಿಗಳ ಇಬ್ಬಂದಿತನವನ್ನು ನಿವಾರಿಸಬೇಕಾಗಿದೆ.

No comments:

Post a Comment