Search This Blog

Sunday 27 April 2014

ಚುನಾವಣಾ ಆಯೋಗ ನಿಷ್ಠುರ ನಿಲುವು ಕೈಗೊಳ್ಳಲಿ 
                                                                     - ಪ್ರದೀಪ್ ಮಾಲ್ಗುಡಿ
ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ಚುನಾವಣಾ ಆಯೋಗ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದರನ್ವಯ ಪ್ರಸಕ್ತ ಚುನಾವಣೆಯಲ್ಲಿ ಕಪ್ಪುಹಣದ ಬಳಕೆಯನ್ನು ತಡೆಯುವ ಕೆಲಸಕ್ಕೆ ಕೈಹಾಕಿದೆ. ಆದರೆ, ನೂರಕ್ಕೆ ನೂರರಷ್ಟು ಇದರ ಚಲಾವಣೆಯನ್ನು ತಡೆಯುವುದು ಕಷ್ಟಸಾಧ್ಯವಾಗಬಹುದು. ಇಂತಹ ಕ್ರಮಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನಿವಾರ‍್ಯವಾದರೂ ಅದರ ಯಶಸ್ಸಿನ ಬಗ್ಗೆ ಎಲ್ಲರಲ್ಲೂ ಅನುಮಾನವಿದೆ. ಇತ್ತೀಚೆಗೆ ಬಾತ್ಮೀದಾರರು ನೀಡಿದ ಮಾಹಿತಿಯನ್ನಾಧರಿಸಿ, ತೆರಿಗೆ ವಂಚಿಸಲು ಕಳ್ಳಸಾಗಣೆಯಾಗುತ್ತಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಶಪಡಿಸಿಕೊಂಡ ಹಣವನ್ನೇ ಪೊಲೀಸ್ ಅಧಿಕಾರಿಗಳು ತಮ್ಮ ಕಿಸೆಗೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗೆ ರಕ್ಷಕರೇ ಭಕ್ಷಕರಾದಲ್ಲಿ ಯಾರನ್ನು ದೂರುವುದು? ಆದ್ದರಿಂದ ಚುನಾವಣಾ ಆಯೋಗದ ಸುಧಾರಣಾ ಕ್ರಮಗಳು ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿ ಜಾರಿಗೆ ಬರುವ ಸಾಧ್ಯತೆಗಳೆಡೆಗೆ ಅನುಮಾನವನ್ನು ಮೂಡಿಸುತ್ತಿವೆ. ಇಂತಹ ಪ್ರಸಂಗಕ್ಕೆ ಕಾರಣವಾಗಿರುವುದು ವ್ಯವಸ್ಥೆ. ಲಂಚ ಪಡೆಯುವುದು, ಕೊಡುವುದು ಎರಡೂ ಭ್ರಷ್ಟ ವ್ಯವಸ್ಥೆಯ ಮುಂದುವರಿಕೆಗೆ ಕಾರಣ. ಇತ್ತೀಚೆಗೆ ನಡೆದ ಬಹುತೇಕ ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತ, ತಮ್ಮ ಸಿದ್ಧಾಂತಗಳಿಗೆ ಪೂರಕವಾದ ವ್ಯಕ್ತಿಗಳಿಗೆ ಮನ್ನಣೆ ನೀಡಲಾಗಿರುವುದು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಇಂತಹವರನ್ನು ಪ್ರತಿಷ್ಠಾಪಿಸಿರುವುದರಿಂದಾಗಿ ಅಕ್ರಮಗಳು ಸಕ್ರಮವಾಗುವ ಸಂಭವಗಳೇ ಹೆಚ್ಚಾಗಿವೆ.
ವಿಧಾನಸಭೆ ಅಥವಾ ಲೋಕಸಭಾ ಚುನಾವಣಾ ನಂತರದಲ್ಲಿ ಅಸ್ಥಿತ್ವಕ್ಕೆ ಬರುವ ಎಲ್ಲ ಸರ್ಕಾರಗಳೂ ತಮ್ಮ ಆಪ್ತ ವಲಯವನ್ನೇ ಅಧಿಕಾರ ಕೇಂದ್ರದ ಸುತ್ತ ನಿಯೋಜಿಸಿಕೊಳ್ಳುವ ಪರಿಪಾಠ ಇಂದು ನಿನ್ನೆಯದಲ್ಲ. ಅಲ್ಲದೆ, ಈ ಅಂಶವನ್ನು ಮನಗಂಡಿರುವ ಅಧಿಕಾರಿಗಳೂ ಮುಂದೆ ಅಧಿಕಾರ ಹಿಡಿಯುವವರ ಪರವಾಗಿ ಕೆಲಸ ನಿರ್ವಹಿಸುವ ಅಥವಾ ಸೋಲುವಂತಹವರ ಮನವಿಗಳಿಗೆ ಕಿವಿಗೊಡದಿರುವ ಪ್ರಸಂಗಗಳು ನಡೆಯುತ್ತವೆ. ಒಟ್ಟಿನಲ್ಲಿ ಮುಕ್ತ, ನ್ಯಾಯಸಮ್ಮತ, ಭ್ರಷ್ಟಾಚಾರರಹಿತ ಚುನಾವಣೆಗಳು ಇನ್ನೂ ಆದರ್ಶಗಳಾಗೆ ಉಳಿದಿವೆ ಎಂಬುದು ಸತ್ಯ. ಈ ಎಲ್ಲ ವಿಷಯಗಳನ್ನು ಗಮನಿಸಿ ಚುನಾವಣಾ ಆಯೋಗ ನಿಷ್ಠುರ ನಿಲುವುಗಳನ್ನು ಕೈಗೊಳ್ಳಬೇಕಾಗಿದೆ.  

No comments:

Post a Comment