Search This Blog

Sunday 27 April 2014

ಮುತ್ಸದ್ಧಿ ಅಭ್ಯರ್ಥಿಗಳನ್ನು ಪರಿಗಣಿಸಿ
                                                                                                                            - ಪ್ರದೀಪ್ ಮಾಲ್ಗುಡಿ
ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕಿನ ಮೇಲೆ ಕಣ್ಣಿಟ್ಟುಕೊಂಡಿವೆ. ಅಧಿಕಾರ ರಾಜಕಾರಣದ ಜೊತೆಜೊತೆಗೆ ಮುತ್ಸದ್ಧಿ ರಾಜಕಾರಣದ ಅಗತ್ಯವನ್ನು ಪಕ್ಷಗಳು ಅರಿಯಬೇಕಾಗಿದೆ. ಜಾತಿ, ಹಣ, ತೋಳ್ಬಲ ಇತ್ಯಾದಿಗಳಿಂದಲೇ ಚುನಾವಣೆಗಳು ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಪ್ರಪಂಚದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅತ್ಯುತ್ತಮ ಸಂಸದೀಯ ಪಟುಗಳ ಅಭಾವ ಸೃಷ್ಟಿಯಾಗಿರುವುದಕ್ಕೆ ರಾಜಕೀಯ ಪಕ್ಷಗಳ ಕೊಡುಗೆ ದೊಡ್ಡದಿದೆ. ಕಳೆದ ಹದನಾರನೇ ಲೋಕಸಭಾ ಅವಧಿಯಲ್ಲಿ ಮಾತನ್ನೇ ಆಡದೇ ಇಡೀ ಐದು ವರ್ಷಗಳನ್ನು ಕಳೆದ ಸಂಸದರಿದ್ದಾರೆ. ದಿನಕಳೆದಂತೆ ಲೋಕಸಭಾ ಕಲಾಪದಲ್ಲಿ ಮುತ್ಸದ್ಧಿಗಳ ಕೊರತೆ ಕಂಡುಬರುತ್ತಿದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳಲ್ಲಾದರೂ ಅರ್ಹ, ದಕ್ಷ, ಪ್ರಾಮಾಣಿಕ, ಜನಪರ ಕಾಳಜಿ, ಸಾಮಾಜಿಕ ಜವಾಬ್ದಾರಿ, ದೂರದೃಷ್ಟಿಯುಳ್ಳ ಹಾಗೂ ವಾಗ್ಮಿಗಳಾಗಿರುವಂತಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ. ಈಗಾಗಲೇ ಎಲ್ಲರೂ ತಿಳಿದಿರುವಂತೆ ನಿಜಕ್ಕೂ ಭಾರತ ಪ್ರಜಾಸತ್ತಾತ್ಮಕ ದೇಶವಾಗಿಲ್ಲ. ಅದಿನ್ನೂ ಸಾಧಿಸಬೇಕಾದ ದೂರದ ಕನಸಾಗಿಯೇ ಉಳಿದಿದೆ. ಈ ಕನಸು ನನಸಾಗಲು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈಗಿನ ಮಾನದಂಡಗಳನ್ನು ಪರಿಷ್ಕರಿಸಿಕೊಳ್ಳಬೇಕಾಗಿದೆ. ಈಗಿನಂತೆಯೇ ತಮ್ಮ ಹೊಗಳು ಭಟ್ಟರು, ಭಟ್ಟಂಗಿಗಳು, ಜಾತಿ, ಕುಟುಂಬ, ಮನೋಧರ್ಮ, ಧರ್ಮ, ಸಿದ್ಧಾಂತಗಳಿಗನುಗುಣವಾದಂತಹ ವ್ಯಕ್ತಿಗಳಿಗೇ ಮಣೆಹಾಕುವುದು ಮುಂದುವರೆದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದೃಢವಾಗುವ ಬದಲು ಕುಸಿಯುವ ಸಾಧ್ಯತೆಗಳೇ ಹೆಚ್ಚಾಗಿವೆ. 
ಪ್ರಶ್ನೆಗಳನ್ನು ಕೇಳದ್ದನ್ನೂ ಕ್ಷಮಿಸಬಹುದು ಆದರೆ ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಂಸದರು ನಡೆದುಕೊಂಡ ಅಸಂವಿಧಾನಿಕ ನಡೆಯನ್ನು ಕ್ಷಮಿಸುವುದು ಹೇಗೆ? ಇಂತಹ ಅಚಾತುರ‍್ಯಗಳು ಭವಿಷ್ಯದಲ್ಲಿ ನಡೆಯದಂತೆ ಈಗಲೇ ಪಕ್ಷಗಳು ಟಿಕೆಟ್ ನೀಡುವ ಸಮಯದಲ್ಲಿ ಎಚ್ಚರವಹಿಸಬೇಕಾಗಿದೆ. ಆ ಮೂಲಕ ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲ ಪಕ್ಷಗಳು ಆರಂಭಿಸಬೇಕಿದೆ. ಗೂಂಡಾರಾಜ್ಯ, ಜಂಗಲ್ ರಾಜ್ಯಗಳ ಬದಲಿಗೆ ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಡಬೇಕಾಗಿದೆ. 


No comments:

Post a Comment