Search This Blog

Sunday 27 April 2014

 ಶಿಶು ನಾಪತ್ತೆ ತಪ್ಪಲಿ
ಪ್ರದೀಪ್ ಮಾಲ್ಗುಡಿ
ಮೈಸೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿರುವ ಶಿಶು ನಾಪತ್ತೆ ಪ್ರಕರಣವನ್ನು ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಕೌಟುಂಬಿಕ ಭಾವನೆಗಳಿಗೆ ತಳುಕು ಹಾಕಿಕೊಂಡಿರುವ ವಿಷಯ. ಗರ್ಭಾಂಕುರವಾದ ದಿನದಿಂದ ಮಗುವಿನ ಜನನದವರೆಗಿನ ಕುಟುಂಬದ ಸದಸ್ಯರ ಕಾಯುವಿಕೆ, ಆಸೆ, ಆಕಾಂಕ್ಷೆ, ಕಟ್ಟಿರುವ ಕನಸುಗಳ ಪ್ರಮಾಣ ಅನೂಹ್ಯ. ಇದ್ದಕ್ಕಿದ್ದಂತೆ, ಮಗುವನ್ನು ಕಳೆದುಕೊಂಡಿರುವ ತಾಯಿಗಾಗಿರುವ ಆಘಾತವನ್ನು ಪರಿಹರಿಸುವುದು ಹೇಗೆ?
ತನ್ನ ಮಗುವಿನ ಬಗೆಗೆ ಬೇರೆಲ್ಲರೂ ಯಾವ ಕನಸನ್ನಾದರೂ ಕಟ್ಟಿರಲಿ. ಆದರೆ ಸ್ವತಃ ತಾಯಿಯೊಬ್ಬಳು ತನ್ನ ಕರುಳ ಕುಡಿಯ ಬಗೆಗೆ ಕಂಡಿರುವ ಕನಸಿನ ಸ್ವರೂಪವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ತಾಯಿ ಮಗು ಬೇರೆಯಾಗಿರುವ ಈ ಪ್ರಕರಣಕ್ಕೆ ಪರಿಹಾರವನ್ನು ಕಂಡುಹಿಡಿಯುವುದು ಅಸಂಭವ. ಏಕೆಂದರೆ, ಈ ನೋವಿಗೆ ಯಾವ ಮದ್ದೂ ಮುಲಾಮಾಗಲಾರದು. ಮೊದಲ ತಿಂಗಳಿನಿಂದ ಜನನದವರೆಗಿನ ಒಂಬತ್ತು ತಿಂಗಳು ತಾಯಿ ತನ್ನ ಮಗುವಿನ ಪ್ರತಿಯೊಂದು ಕ್ಷಣವನ್ನೂ ಅನುಭವಿಸಿ ಮಗುವಿನ ಒಡನಾಡಿಯಾಗಿ ಸುಖಿಸುತ್ತಾಳೆ. ಮಗುವಿನ ಸಣ್ಣ ಚಲನವಲನಗಳು ತನ್ನ ಸ್ಪರ್ಶಸುಖಕ್ಕೆ ಲಭಿಸಿದಾಗ ಅವಳು ಪಡುವ ಆನಂದಕ್ಕೆ ಪಾರವೇ ಇಲ್ಲ. ಅನ್ನಾಹಾರ ಸೇವನೆಗಳಲ್ಲೂ ಮಗುವಿಗಾಗಿ ಅನೇಕ ಬದಲಾವಣೆಗಳಾಗುತ್ತವೆ. ಎಷ್ಟೋ ತಾಯಂದಿರು ತಮ್ಮ ಮಗುವಿಗಾಗಿ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ತನಗಲ್ಲದಿದ್ದರೂ ತನ್ನ ಮಗುವಿಗಾಗಿ ಜೀವ ಉಳಿಸಿಕೊಂಡಿರುವ ತಾಯಂದಿರೆಷ್ಟೋ?
ಈ ಯಾವ ಭಾವನೆಗಳಿಗೂ ಬೆಲೆಯಿಲ್ಲದಂತೆ ಮಗುವಿನ ನಾಪತ್ತೆ ಪ್ರಕರಣ ನಡೆಯುತ್ತಿವೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಬೇಜವಾಬ್ದಾರಿ ಪ್ರಕರಣಗಳು ಆಗಾಗ ನಡೆಯುತ್ತಲೆ ಇರುತ್ತವೆ. ಆದರೂ ಇಂತಹ ಭಾವನಾತ್ಮಕ ವಿಷಯಗಳಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗುತ್ತಲೇ ಇದ್ದಾರೆ. ಇಂತಹ ಕರ್ತವ್ಯಲೋಪಕ್ಕೆ ಹೊಣೆಗಾರರಾಗಿರುವವರನ್ನು ತಕ್ಷಣ ಸೇವೆಯಿಂದ ಬಿಡುಗಡೆ ಮಾಡಿ, ದಕ್ಷರನ್ನು ನೇಮಿಸಿ ಇಂತಹ ಅವಘಡಗಳು ನಡೆಯದಂತೆ ತಡೆಯಬೇಕಾಗಿದೆ.

No comments:

Post a Comment