Search This Blog

Sunday 27 April 2014

                                 ಹೊಸ ಪಕ್ಷಗಳಿಗೆ ಮಾನ್ಯತೆ 
ಪ್ರದೀಪ್ ಮಾಲ್ಗುಡಿ
ಹೊಸ ರಾಜಕೀಯ ಪಕ್ಷಗಳಿಗೆ ಜನರಿಂದ ಮಾನ್ಯತೆ ಸಿಗುತ್ತಿಲ್ಲ. ಇದರ ಲಾಭ ಚಿರಪರಿಚಿತ ರಾಷ್ಟ್ರೀಯ ಪಕ್ಷಗಳಿಗೆ ಆಗುತ್ತಿದೆ. ಅಲ್ಲದೆ ಹೊಸ ರಾಜಕೀಯ ಪಕ್ಷಗಳು ಜನರನ್ನು ತಲುಪುವಲ್ಲಿ ವಿಫಲವಾಗುವುದಕ್ಕೆ ಚುನಾವಣಾ ಆಯೋಗ ಚುನಾವಣೆಯ ಸಮಯದಲ್ಲಿ ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮಗಳು ಪ್ರಮುಖ ಕಾರಣವಾಗಿವೆ. ಕಳೆದ ಕೆಲವು ವರ್ಷಗಳಿಂದ ಹಂತಹಂತವಾಗಿ ಆಯೋಗವು ರಾಜಕೀಯ ಪಕ್ಷಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತ ಬಂದಿದೆ. ಅದರಲ್ಲಿ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್, ಪಕ್ಷಗಳ ಚಿಹ್ನೆಯನ್ನೊಳಗೊಂಡ ಪ್ಲಾಸ್ಟಿಕ್ ಪ್ರಚಾರ ಸಾಮಗ್ರಿಗಳನ್ನು ನಿಷೇಧಿಸಲಾಗಿದೆ.
ಇದರಿಂದಾಗಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಪರಿಚಿತವಾಗುವುದು ಕಷ್ಟಕರವಾಗುತ್ತಿದೆ. ಭಾರತದಲ್ಲಿ ಚುನಾವಣಾ ಅವಧಿಯಲ್ಲಿ ಅನೇಕ ರಾಜಕೀಯ ಪಕ್ಷಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ, ಈ ಹಿಂದೆ ಚುನಾವಣಾ ಪ್ರಚಾರದ ಮೇಲೆ ಹಿಡಿತವಿಲ್ಲದ ಕಾರಣ ಜನರಿಗೆ ತಮ್ಮ ಪಕ್ಷ, ಸಿದ್ಧಾಂತ, ಅಭ್ಯರ್ಥಿಗಳ ಸಾಧನೆಗಳು, ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಡುವ ಸಾಧ್ಯತೆ ಇತ್ತು. ಆದರೆ ಈಗಿನ ಸನ್ನಿವೇಶದಲ್ಲಿ ಹೊಸ ಪಕ್ಷವೊಂದು ತಮ್ಮ ಕಾರ‍್ಯಕರ್ತರಿಗೆ ತಮ್ಮ ಪಕ್ಷದ ಚಿಹ್ನೆಯನ್ನು ಪರಿಚಿತಗೊಳಿಸುವುದು ತ್ರಾಸದಾಯಕವಾಗುತ್ತಿದೆ.
ಇಂತಹ ವಿಷಮ ಸನ್ನಿವೇಶದ ಪರಿಣಾಮ ಕಾಂಗ್ರೆಸ್, ಬಿಜೆಪಿಯಂತಹ ರಾಜಕೀಯ ಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ಪರಿಚಿತವಾಗಿರುವ ಕಾರಣದಿಂದ ಬಹುತೇಕ ಮತಚಲಾಯಿಸಲು ಬರುವ ಮತದಾರರು ಹಸ್ತದ ಗುರುತು, ಕಮಲದ ಗುರುತುಗಳನ್ನು ಪತ್ತೆಹಚ್ಚುತ್ತಾರೆ. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬರುವ ಪಕ್ಷಗಳ ಗುರುತುಗಳನ್ನು ಇಷ್ಟು ಸುಲಭವಾಗಿ ಪತ್ತೆಹಚ್ಚಲಾಗದು. ಜತೆಗೆ ಮತದಾನದ ವೇಳೆಯಲ್ಲಿ ಒಬ್ಬ ವ್ಯಕ್ತಿಗೆ ಅಲ್ಲಿ ಯೋಚಿಸಿ, ತಮ್ಮ ಆಯ್ಕೆಯ ಅಭ್ಯರ್ಥಿಯ ಪಕ್ಷ, ಗುರುತು, ಹೆಸರುಗಳನ್ನು ಹುಡುಕುವಷ್ಟು ವ್ಯವಧಾನವಿರುವುದಿಲ್ಲ. ಏಕೆಂದರೆ, ಮತದಾನದ ಮೂಲಕ ನಾವು ನಮ್ಮ ಅತ್ತ್ಯುನ್ನತ ಜವಾಬ್ದಾರಿಯೊಂದನ್ನು ನಿರ್ವಹಿಸುತ್ತಿದ್ದೇವೆಂಬ ತಿಳುವಳಿಕೆ ಇನ್ನೂ ಸಾರ್ವಜನಿಕರಲ್ಲಿ ಮೂಡಿಲ್ಲ. ಕೆಲವು ಸಂದರ್ಭದಲ್ಲಂತೂ ಮತದಾನಕ್ಕಾಗಿ ನೂಕುನುಗ್ಗಲು ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮತದಾರರು ಗೊಂದಲಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಹೊಸ ಭರವಸೆ, ಆಶಯ, ತತ್ವ, ಸಿದ್ಧಾಂತಗಳನ್ನು ಜನರಲ್ಲಿ ಬಿತ್ತುವ ಪಕ್ಷಗಳನ್ನು ಕಟ್ಟುವ ಮುತ್ಸದ್ಧಿ ರಾಜಕಾರಣಿಗಳ ಕೊರತೆಯಿದೆ. ಇದರ ಜತೆಗೆ ಇತ್ತೀಚೆಗೆ ಜನ್ಮತಾಳುತ್ತಿರುವ ಪಕ್ಷಗಳು ತಮ್ಮ ವೈಯಕ್ತಿಕ ಅಸಹನೆ, ಎದುರಾಳಿಯನ್ನು ಮಟ್ಟ ಹಾಕುವ ಹುನ್ನಾರ, ಅಧಿಕಾರ ಲಾಲಸೆ, ಕೌಟುಂಬಿಕ ರಾಜಕಾರಣ, ವೈಯಕಿಕ ಲಾಭಾಕಾಂಕ್ಷೆಗಳಿಂದಾಗಿ ರೂಪುಗೊಳ್ಳುತ್ತಿವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಈ ಪಕ್ಷಗಳ ಮೇಲೆ ಯಾವುದೇ ನಂಬಿಕೆ ಉಂಟಾಗುತ್ತಿಲ್ಲ. ಈ ಕಾರಣಗಳಿಂದಾಗಿಯೂ ಹೊಸ ಪಕ್ಷಗಳನ್ನು ಜನ ತಿರಸ್ಕರಿಸುತ್ತಿದ್ದಾರೆ.

No comments:

Post a Comment