Search This Blog

Wednesday 23 April 2014

ಸಾಹಿತಿಗಳ ಪಕ್ಷಪಾತ: ಬಾಯಿಂದ ಉಲ್ಕಾಪಾತ
ಪ್ರದೀಪ್ ಮಾಲ್ಗುಡಿ
ಇಷ್ಟು ದಿವಸ ಕರ್ನಾಟಕಕ್ಕೆ ಸೀಮಿತವಾಗಿದ್ದ ಸಾಹಿತಿಗಳ ಪಕ್ಷಪ್ರೀತಿ ಇಂದು ನವದೆಹಲಿ ತಲುಪಿದೆ. ಆಜನ್ಮ ವೈರಿಗಳಂತಾಡುವ ಎರಡು ಗುಂಪಿನ ಸಾಹಿತಿಗಳು ಪರಸ್ಪರರ ಮೇಲೆ ವಾಗ್ಬಾಣಗಳ ದಾಳಿ ನಡೆಸಿದ್ದಾರೆ. ಎಷ್ಟೇ ಆಗಲಿ ಸರಸ್ವತಿ ಪುತ್ರರಲ್ಲವೇ? ಅದಕ್ಕಾದರೂ ಗೌರವ ಕೊಡುವ ಸಲುವಾಗಿ ಈ ರೀತಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿರಬಹುದು. ಇರಲಿ. ’ಕೌಟುಂಬಿಕ ರಜಕಾರಣ ಮಾಡುವ ಕಾಂಗ್ರೆಸ್‌ಗಿಂತ, ಚಹಾ ಮಾರುವ ಹುಡುಗನನ್ನು ಪ್ರಧಾನಿ ಮಾಡಬೇಕೆಂದು’  ಡಾ.ಎಸ್.ಎಲ್.ಭೈರಪ್ಪನವರು ಪಣ ತೊಟ್ಟಿದ್ದಾರೆ. ಇವರನ್ನು, ಇವರ ಸಾಹಿತ್ಯ ತತ್ವವನ್ನು ಕಾಲದಿಂದಲೂ ವಿರೋಧಿಸಿಕೊಂಡು ಬಂದಿರುವ ಪ್ರೊ.ಯು.ಆರ್.ಅನಂತಮೂರ್ತಿಯವರು, ’ಕೋಮುವಾದಿಯ ಕೈಗೆ ಈ ದೇಶದ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಹಾಗೂ ಆಪ್ ಬೆಂಬಲಿಸಬೇಕೆಂದು’ ಕರೆ ಕೊಡುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಾಣೆಯ ಸಮಯದಲ್ಲಿ  ಪ್ರಗತಿಪರರೆಂದು ಮಾಧ್ಯಮದವರಿಂದ ಕರೆಸಿಕೊಂಡಿದ್ದ ಸಾಹಿತಿಗಳ ಗುಂಪೊಂದು ಕಾಂಗ್ರೆಸ್ ಪರ ಬಹಿರಂಗ ಪ್ರಚಾರಕ್ಕಿಳಿದಿತ್ತು. ಇದೇ ಮಾಧ್ಯಮದವರ ಪರಿಣಾಮದಿಂದಾಗಿ  ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಸರಣಿ ಹಗರಣಗಳು ಒಂದಾದ ನಂತರ ಒಂದು ಬಯಲಾಗಿದ್ದವು. ಇದರ ಪರಿಣಾಮದಿಂದ ಕರ್ನಾಟಕದಲ್ಲಿ ಆಡಳಿತ ವಿರೋಧೀ ಅಲೆ ಎದ್ದಿತು. ಆದರೆ ಇದನ್ನು ಕೆಲ ಸಾಹಿತಿಗಳ ಗುಂಪು ತಮ್ಮ ಬಹಿರಂಗ ಪ್ರಚಾರದಿಂದಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಭ್ರಮೆಗೆ ಒಳಗಾಯಿತು. ಇದನ್ನು ಸ್ವತಃ ಸಿ.ಎಂ. ಸಿದ್ದರಾಮಯ್ಯನವರೂ ನಂಬಿದಂತಿದೆ. ಇದರ ಪರಿಣಾಮ ಮತ್ತೆ ಲೋಕಸಭೆ ಚುನಾವಣೆಯ ವೇಳೆಯಲ್ಲಿಯೂ ಈ ಸಾಹಿತಿಗಳು ಕಾಂಗ್ರೆಸ್ ಪರವಾಗಿ ಬಹಿರಂಗ ಚುನಾವಣಾ ಪ್ರಚಾರಕ್ಕಿಳಿದರು.
ಸಾಹಿತ್ಯಕ ವಲಯದಲ್ಲಿ ಎಡ, ಬಲ, ಬುದ್ಧಿಜೀವಿ, ಗಂಭೀರ, ಜನಪ್ರಿಯ, ಸಾಮಾನ್ಯ ಹಾಗೂ ಪ್ರಗತಿಪರ-ಪ್ರತಿಗಾಮಿ ಎಂಬ ಗುಂಪುಗಳು ಬಹಳ ಕಾಲದಿಂದ ಅಸ್ತಿತ್ವದಲ್ಲಿವೆ. ಇವರಲ್ಲಿ ಮೊದಲ ಮೂರು ಗುಂಪಿನವರು ಉಳಿದವರನ್ನು ಉಳಿದ ಮೂರು ಗುಂಪಿಗೆ ಸದಾ ಸೇರಿಸುವ, ಕೆಲವೊಮ್ಮೆ ತಾವೇ ಇನ್ನೆರಡು ಗುಂಪುಗಳಿಗೆ ಸೇರುವ ಪ್ರಯತ್ನಗಳನ್ನು ಮಾಡುತ್ತಿರುವುದು ಹೊಸದಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮ್ಮನಿದ್ದ ಒಂದು ಗುಂಪು ಈಗ ಪ್ರತ್ಯಕ್ಷವಾಗಿ ಬಿಜೆಪಿ ಪರವಾಗಿ ಪ್ಯಾಡ್ ಕಟ್ಟಿಕೊಂಡು ಬ್ಯಾಟ್ ಮಾಡಲುತ್ಸುಕವಾಗಿದೆ. ಈ ಎರಡೂ ಗುಂಪಿನವರು ಒಂದು ಕಾಲಕ್ಕೆ ಹೆಗಲ ಮೇಲೆ ಕೈ ಹಾಕಿಕೊಂಡೋ ಅಥವಾ ಗುರು-ಶಿಷ್ಯರಾಗಿಯೋ ವರ್ತಿಸಿದವರು. ಉದಾಹರಣೆಗೆ; ಪ್ರೊ.ಕೆ.ಮರುಳಸಿದ್ದಪ್ಪನವರಿಗೆ ಪ್ರೊ.ಎಂ.ಚಿದಾನಂದಮೂರ್ತಿಯವರು ಪಿಎಚ್.ಡಿ., ಪದವಿಗೆ ಮಾರ್ಗದರ್ಶಕರಾಗಿದ್ದರು. ಅದಕ್ಕೆ ಸಾಕ್ಷಿಯಾಗಿ ಈಗಲೂ ಮರುಳಸಿದ್ದಪ್ಪನವರ ’ಆಧುನಿಕ ಕನ್ನಡ ನಾಟಕ’ ಕೃತಿ ರಾರಾಜಿಸುತ್ತಿದೆ. ಇನ್ನು ಗಿರೀಶ್ ಕಾರ್ನಾಡ್ ಅವರು ಡಾ.ಎಸ್.ಎಲ್.ಭೈರಪ್ಪನವರ ’ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಬಿ.ವಿ.ಕಾರಂತರ ಜತೆಗೆ ಸಿನಿಮಾ ಮಾಡಿದ್ದರು. ಆಗ ಇಲ್ಲದ ದ್ವೇಷಗಳು, ತಾತ್ವಿಕ ಭಿನ್ನಾಭಿಪ್ರಾಯಗಳು, ಎಡ, ಬಲ ವಾದಗಳು ಕಾಲಾನಂತರದಲ್ಲಿ ಪರಸ್ಪರ ಎದುರಾದವು. ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಶ್ರದ್ಧಾವಂತ ಹಿಂದೂವಾದಿಗಳು ಹಾಗೂ ಹಿಂದೂ ಧರ್ಮದ ಕಟು ವಿಮರ್ಶಕರು ವಿರೋಧೀ ಗುಂಪುಗಳಾಗಿ ಸೆಣಸುತ್ತಿದ್ದಾರೆ.
ಇಲ್ಲಿ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಜಾತಿ, ಕೋಮು, ಧರ್ಮಗಳು ಕೆಲಸ ಮಾಡುತ್ತಿವೆ. ಇದನ್ನು ಸ್ವತಃ ಈ ಎರಡೂ ಗುಂಪುಗಳು ಆತ್ಮಸಾಕ್ಷಿಯಿಂದ ಅವಲೋಕಿಸಿಕೊಳ್ಳಬೇಕಾಗಿದೆ. ಇನ್ನೊಂದು ಅವರ ಕೃತಿ ಜನಪ್ರಿಯವಾಗುತ್ತಿದೆ ಎಂದರೆ ಇವರಿಗೆ ಅಸಹನೆ. ಇವರ ಕೃತಿ ಜನಪ್ರಿಯವಾಗುತ್ತಿದೆ ಎಂದರೆ ಅವರಿಗೆ ಅಸಹನೆ. ಇಲ್ಲಿ ಜಯ ಯಾರಿಗೆಂಬುದು ಇನ್ನೂ ನಿಶ್ಚಯವಾಗಿಲ್ಲ. ಆದರೆ, ವಿರೋಧೀ ಪಾಳೆಯದವರ ಜಯದ ಕನಸು ಪರಸ್ಪರರಿಗೆ ದುಃಸ್ಪಪ್ನವಾಗಿ ಕಾಡುತ್ತಿದೆ. ಇದರ ಪರಿಣಾಮ ಅವರಿಗೆ ಇವರು, ಇವರಿಗೆ ಅವರು ಕೆಸರೆರಾಚಾಡುತ್ತಿದ್ದಾರೆ. ಇದರಿಂದ ನೋಡುವವರಿಗೆ ರೋಮಾಂಚನ ಮೂಡುತ್ತಿದೆ.

No comments:

Post a Comment