Search This Blog

Tuesday 13 June 2017

ಕಣಿವೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರಗಾರಿಕೆ

ಜಮ್ಮು ಕಾಶ್ಮೀರದಲ್ಲಿ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಮೈತ್ರಿ ಪಕ್ಷ ಪಿಡಿಪಿಗೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ತಡವಾಗಿ ವರದಿಯಾಗಿದೆ. ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರ ಅಕ್ಷರಶಃ ಕಾದ ಕುಲುಮೆಯಾಗಿದೆ. ಶಾಲಾ ಕಾಲೇಜು ಬಂದ್, ಜನಜೀವನ ಅಸ್ತವ್ಯಸ್ತತೆ ನಿರಂತರವಾಗಿದೆ. ಇನ್ನು ಪೊಲೀಸರು ಮತ್ತು ಸೇನೆಯ ಮೇಲೆ ನಾಗರಿಕರ ಕಲ್ಲೆಸೆತ, ಇದನ್ನು ತಡೆಯಲು ಪೆಲೆಟ್ ಗನ್​ಗಳ ಬಳಕೆ ಇತ್ಯಾದಿ ನಡೆದಿವೆ.
ಈ ನಡುವೆ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಕಣಿವೆ ರಾಜ್ಯದ ರಾಜೌರಿಯಲ್ಲಿ ಬೆಳೆ ಕಟಾವು ಮಾಡಲು ಕೂಡ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಸಿಎಂ ಆದರೆ, ಪರಿಸ್ಥಿತಿಯನ್ನು ತಹಬಂದಿಗೆ ತರುವುದು ಸಾಧ್ಯ ಎಂದು ಬಿಜೆಪಿ ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿಯವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆ. ಈ ಮೂಲಕ ಕಣಿವೆ ರಾಜ್ಯದಲ್ಲಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ತಂತ್ರ ಹೆಣೆಯುತ್ತಿದೆ.
ಆದರೆ, ಈ ಪ್ರಸ್ತಾವನೆಯನ್ನು ಮೆಹಬೂಬ ಮುಫ್ತಿ ನಿರಾಕರಿಸಿದ್ದಾರೆ. ಏಪ್ರಿಲ್ 24ರಂದು ಜಮ್ಮು ಕಾಶ್ಮೀರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದ ಮೆಹಬೂಬ ಮುಫ್ತಿಯವರ ಮುಂದೆ ಈ ಪ್ರಸ್ತಾವನೆಯನ್ನು ಇಡಲಾಗಿದೆ ಎಂದು ವರದಿಯಾಗಿದೆ. ಬಿಜೆಪಿಯ ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ.
ಮುಫ್ತಿ – ಮೋದಿ ಭೇಟಿ ವೇಳೆ 6 ತಿಂಗಳಿಗೊಮ್ಮೆ ಸಿಎಂ ಹುದ್ದೆಯನ್ನು ಮೈತ್ರಿಪಕ್ಷಗಳು ವಿನಿಮಯ ಮಾಡಿಕೊಳ್ಳುವ ಪ್ರಸ್ತಾವನೆಯನ್ನೂ ಮುಫ್ತಿಯವರ ಮುಂದಿಡಲಾಗಿದೆ. ಆದರೆ ಈ ಯಾವ ಪ್ರಸ್ತಾವನೆಗಳಿಗೂ ಮುಫ್ತಿ ಸಹಮತ ವ್ಯಕ್ತಪಡಿಸಿಲ್ಲ.
87 ಸದಸ್ಯ ಬಲದ ಕಾಶ್ಮೀರ ವಿಧಾನಸಭೆಗೆ 2014ರಲ್ಲಿ ಚುನಾವಣೆ ನಡೆದಿತ್ತು. ನ್ಯಾಷನಲ್ ಕಾನ್ಫರೆನ್ಸ್​​ನ ಒಮರ್ ಅಬ್ದುಲ್ಲಾ ಅಧಿಕಾರ ಕಳೆದುಕೊಂಡಿದ್ದರು. ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್​ 15, ಕಾಂಗ್ರೆಸ್ 12, ಜೆಕೆ ಪಿಸಿ 2, ಸಿಪಿಐ (ಎಂ) ಮತ್ತು ಜೆಕೆ ಪಿಡಿಎಫ್​ ತಲಾ ಒಂದು ಹಾಗೂ ಮೂವರು ಪಕ್ಷೇತರರು ವಿಧಾನಸಭೆಗೆ ಆಯ್ಕೆಯಾಗಿದ್ದರು.
ಪಿಡಿಪಿ ಮತ್ತು ಬಿಜೆಪಿ ನಡುವೆ ಮೈತ್ರಿ ಕೂಟದಿಂದ ಪಿಡಿಪಿಯ ಮುಫ್ತಿ ಮೊಹಮದ್ ಸಯೀದ್ ಸಿಎಂ ಆಗಿದ್ದರು. ಆದರೆ, ಜನವರಿ 7, 2016ರಂದು ಅವರ ನಿಧನದ ನಂತರ, ಮೈತ್ರಿಕೂಟದಲ್ಲಿ ಸಿಎಂ ಯಾವ ಪಕ್ಷದವರು ಆಗಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 4, 2016ರವರೆಗೆ ಹಲವು ಸುತ್ತಿನ ಮಾತುಕತೆಗಳು ನಡೆದು, ಅಂತಿಮವಾಗಿ ಮುಫ್ತಿ ಮೊಹಮದ್ ಸಯೀದ್ ಪುತ್ರಿ ಮೆಹಬೂಬ ಮುಫ್ತಿ ಅವರಿಗೆ ಸಿಎಂ ಹುದ್ದೆಯನ್ನು ಬಿಜೆಪಿ ಬಿಟ್ಟುಕೊಟ್ಟಿತ್ತು.
ಪಿಡಿಪಿ ಮತ್ತು ಬಿಜೆಪಿ ವಿಧಾನಸಭೆಯಲ್ಲಿ ಗಳಿಸಿರುವ ಸ್ಥಾನಗಳ ನಡುವೆ ಇರುವ ಅಂತರ ಕೇವಲ 3. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷಕ್ಕೆ ಸಿಎಂ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿ ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದೆ ಎಂದು ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಇದೀಗ ಬದಲಾದ ಪರಿಸ್ಥಿತಿಯಲ್ಲಿ ಹಿಂಬಾಗಿಲಿನಿಂದ ಕಣಿವೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. 2004ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 79, ಕಾಂಗ್ರೆಸ್ 65, ಜೆಡಿಎಸ್ 58 ಸ್ಥಾನಗಳನ್ನು ಗಳಿಸಿತ್ತು. ಆದರೆ, ಅತಿಹೆಚ್ಚಿನ ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರದಿಂದ ದೂರ ಉಳಿದು, ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು.
2006ರಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮುರಿದಿದ್ದ ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. 58 ಸ್ಥಾನ ಗಳಿಸಿದ್ದ ಜೆಡಿಎಸ್​​ನ ಕುಮಾರಸ್ವಾಮಿಯವರಿಗೆ ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. 20 ತಿಂಗಳ ಅವಧಿಗೆ ಅಧಿಕಾರವನ್ನು ಹಂಚಿಕೊಂಡು ಮೊದಲು ಕುಮಾರಸ್ವಾಮಿ ನಂತರ ಯಡಿಯೂರಪ್ಪ ಸಿಎಂ ಎಂದು ಒಪ್ಪಂದವಾಗಿತ್ತು.
ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಕುಮಾರಸ್ವಾಮಿ ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿದರು. 2009ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110, ಕಾಂಗ್ರೆಸ್ 80, ಜೆಡಿಎಸ್ 28 ಸ್ಥಾನಗಳನ್ನು ಗಳಿಸಿತ್ತು. ನಂತರ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಮುಂದಿನ ಅವಧಿಗೆ ಅಧಿಕಾರ ಹಿಡಿಯಲು ಕೂಡ ರಣತಂತ್ರ ಹೆಣೆಯುತ್ತಿದೆ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

No comments:

Post a Comment