Search This Blog

Tuesday 13 June 2017

ಮಗ ನರೇಂದ್ರ ಮೋದಿಯವರನ್ನು ಗಂಗಾ ತಾಯಿ ಕೈ ಬೀಸಿ ಕರೆಯುತ್ತಿದ್ದಾಳೆ

ವಾರಾಣಸಿಯಲ್ಲಿ ಮೈಬಿಚ್ಚಿಕೊಂಡು ಹರಿಯುತ್ತಿರುವ ಗಂಗಾ ಮಾತೆ ತಮ್ಮ ಪುತ್ರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಕೈಬೀಸಿ ಕರೆಯುತ್ತಿದ್ದಾಳೆ. ಈಗ ಗಂಗಾ ಮಾತೆಯನ್ನು ಸ್ವಚ್ಛಗೊಳಿಸಿ ಎಂಬ ಘೋಷವಾಕ್ಯದ ಬದಲು, ಗಂಗೆಯನ್ನು ಉಳಿಸಿ ಘೋಷವಾಕ್ಯವನ್ನು ಅವರೀಗ ಚಾಲ್ತಿಗೆ ತರಬೇಕಿದೆ.
ಮೋದಿಯವರಾಗಲಿ ಬಿಜೆಪಿಯವರಾಗಲಿ ಯಾವುದೇ ಧಾರ್ಮಿಕ ಅಂಶಗಳನ್ನು ತಮ್ಮ ಮತಗಳಾಗಿ ಪರಿವರ್ತಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಗಂಗೆಯ ವಿಷಯದಲ್ಲೂ ಇದು ಸಾಬೀತಾಗಿದೆ. ಏಪ್ರಿಲ್ 24ರ 2014ರ ಅಂಬೇಡ್ಕರ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ್ದರು. ಅಂದು ಗಂಗಾ ಮಾತೆ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಹೇಳುವುದರ ಮೂಲಕ ದೇಶದಲ್ಲಿ ಭಾವುಕ, ಧಾರ್ಮಿಕ ವ್ಯಕ್ತಿಗಳ ಮನಸನ್ನು ಕದ್ದುಬಿಟ್ಟಿದ್ದರು. ಭಾವುಕತೆಯನ್ನು ಬಂಡವಾಳವಾಗಿಸಿಕೊಳ್ಳುವ ಚಾಳಿ ಅವರಿಗೆ ರಕ್ತಗತವಾಗಿದೆ.
ಮೇ 18, 2014ರಂದು ಗಂಗಾ ಆರತಿಯನ್ನು ದಶಾಶ್ವಮೇಧ ಘಾಟ್​​ನಲ್ಲಿ ಮೋದಿ ಮಾಡಿದ್ದರು. ಆಗ ನಾನು ವಾರಾಣಸಿ ಮತ್ತು ಗಂಗೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಭೀಷ್ಮ ಪ್ರತಿಜ್ಞೆಯನ್ನೂ ಕೈಗೊಂಡಿದ್ದರು.
ತಾವು ನೀಡಿದ್ದ ಬಹುತೇಕ ಭರವಸೆಗಳನ್ನು ಮರೆತುಬಿಟ್ಟಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಗಂಗಾ ಪುನರುಜ್ಜೀವನ ಯೋಜನೆಯೊಂದನ್ನು ಮಾತ್ರ ಮರೆಯಲಿಲ್ಲ. ಗಂಗಾ ನದಿಯ ಸ್ವಚ್ಛತೆಯ ಹೊಣೆಯನ್ನು ಜಲಸಂಪನ್ಮೂಲ ಇಲಾಖೆಯ ಹೆಗಲಿಗೆ ಹಾಕಿದರು. ಗಂಗಾ ಪುನರುಜ್ಜೀವನ ಕಾರ್ಯಕ್ರಮವನ್ನು ಜಲಸಂಪನ್ಮೂಲ ಸಚಿವೆ ಉಮಾ ಭಾರತಿಯವರಿಗೆ ವಹಿಸಿದರು.
ನಮಾಮಿ ಗಂಗೆ ಯೋಜನೆಯನ್ನು ಘೋಷಿಸಿದ ಪ್ರಧಾನಿ ಮೇ 12, 2015ರಂದು ಬರೋಬ್ಬರಿ 20,000 ಕೋಟಿ ರೂ. ಮೊತ್ತವನ್ನು ಈ ಯೋಜನೆಗೆ ಒದಗಿಸುವ ಭರವಸೆ ನೀಡಿದ್ದರು. ಅವಶ್ಯಕತೆ ಇದ್ದಾಗ ಇನ್ನೂ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಕೂಡ ಹೇಳಿದರು.
ಆಗಸ್ಟ್​ 2016ರ ಹೊತ್ತಿಗೆ ಬರೋಬ್ಬರಿ 2,958 ಕೋಟಿ ರೂ.ಗಳನ್ನು ಗಂಗಾ ಮಾತೆಯ ಸ್ವಚ್ಛತೆಗೆ ಕೇಂದ್ರ ಸರ್ಕಾರ ವಿನಿಯೋಗಿಸಿದೆ ಎಂದು ಆರ್​ಟಿಐ ಅಡಿ ಸಲ್ಲಿಸಲಾದ ಅರ್ಜಿಗೆ ವಿವರ ಲಭ್ಯವಾಗಿತ್ತು.
ಮೂರು ವರ್ಷಗಳ ನಂತರದ ರಿಯಾಲಿಟಿ ಚೆಕ್​​​ನಿಂದ ಲಭ್ಯವಾಗಿರುವ ಮಾಹಿತಿಗಳು ಬೇರೊಂದು ಕತೆಯನ್ನೇ ಹೇಳುತ್ತವೆ. ಮೋದಿ ಬೆಂಬಲಿಗ ಪರಿಸರವಾದಿಗಳು ಮತ್ತು ಗಂಗಾ ಮಾತೆಯನ್ನು ಆಧುನಿಕ ಭಗೀರಥನಾಗಿ ನರೇಂದ್ರ ಮೋದಿಯವರು ಜನರ ಬಳಕೆಗೆ ಲಭ್ಯವಾಗುವಂತೆ ಮಾಡಿಯೇ ಮಾಡುತ್ತಾರೆ ಎಂದು ನಂಬಿಕೊಂಡಿರುವ ಶ್ರದ್ಧಾವಂತ ಹಿಂದೂಗಳಿಗಂತೂ ಈ ಮಾಹಿತಿಗಳು ಕಹಿ ಕಷಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದೇ ವರ್ಷದ ಮಾರ್ಚ್​​ನಲ್ಲಿ ಉತ್ತರಾಖಂಡ್ ಹೈ ಕೋರ್ಟ್​ ಗಂಗೆ ಮತ್ತು ಯಮುನಾ ನದಿಗಳಲ್ಲಿ ಕಲುಷಿತ ವಸ್ತುಗಳನ್ನು ಎಸೆಯದಂತೆ ಸೂಚನೆ ನೀಡಿತ್ತು. ಕೆಲವು ದಿನಗಳ ಹಿಂದೆ ಗಂಗಾ ನದಿಯಲ್ಲಿ ಕಸ ಸುರಿದಿರುವ ಕುರಿತು ಸ್ವತಃ ಬಿಜೆಪಿ ಅಧಿಕಾರದಲ್ಲಿರುವ ಉತ್ತರಾಖಂಡ್ ಸರ್ಕಾರ ಅಧಿಕೃತವಾಗಿ ಕೋರ್ಟ್​ನಲ್ಲಿ ಹೇಳಿಕೆ ನೀಡಿತ್ತು.
ಇದಕ್ಕೆ ಪೂರಕವಾಗಿ ಗಂಗಾ ನದಿಯ ದಡದಲ್ಲಿ ವಾಸಿಸುವ ನಾಗರಿಕರ ಅನುಭವಗಳು ಇವೆ. ಈ ಹಿಂದಿಗಿಂತ ಗಂಗಾ ನದಿ ಮಲಿನವಾಗಿದೆ ಮತ್ತು ಒಣಗಿ ಹೋಗಿದೆ ಎನ್ನುವುದು ಅವರ ಅಭಿಪ್ರಾಯ. ಮೋದಿಯವರ ತವರು ಕ್ಷೇತ್ರ ವಾರಾಣಸಿಯೊಂದರಲ್ಲೇ 32 ಚರಂಡಿಗಳಿಂದ ಪ್ರತಿನಿತ್ಯ ಮಲಿನ ನೀರು ಪವಿತ್ರ ಗಂಗಾ ಮಾತೆಯನ್ನು ಸೇರುತ್ತಿದೆ. ವಾರಾಣಸಿಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿಲ್ಲ. ಇನ್ನು ನದಿಯ ನೀರಿನಲ್ಲಿ ಅಗತ್ಯ ಪ್ರಮಾಣದ ನೀರಿನ ಅಂಶಗಳಾಗಲಿ ಅಥವಾ ಆಮ್ಲಜನಕವಾಗಲಿ ಇಲ್ಲ ಎನ್ನುವುದು ಜಲ ತಜ್ಞರ ಅಭಿಪ್ರಾಯ.
ಸದ್ಯಕ್ಕೆ ಪ್ರಧಾನಿಯವರು ಮಾಡಬೇಕಾದ ಮೊದಲ ಕರ್ತವ್ಯವೆಂದರೆ ತಮ್ಮ ಮಾನಸ ತಾಯಿ ಗಂಗೆಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ಅದಕ್ಕಾಗಿ ಸ್ವಚ್ಛ ಗಂಗಾ ಬದಲು ಗಂಗಾ ಉಳಿಸಿ ಆಂದೋಲನವನ್ನು ಕೈಗೊಳ್ಳಬೇಕು. ಸದ್ಯಕ್ಕೆ ಗಂಗಾ ಮಾತೆ ಉಳಿವಿಗಾಗಿ ಹೋರಾಡುತ್ತಿದ್ದಾಳೆ. ತನ್ನ ಕಂದ ಮೋದಿಯವರನ್ನು ಎರಡೂ ಕೈಬೀಸಿ ಕರೆಯುತ್ತಿದ್ದಾಳೆ. ಈ ದೃಶ್ಯ ಮೋದಿಯವರ ಕನಸಿಗೆ ಬಂದರೆ ಅವರು ಎಚ್ಚೆತ್ತಾರೇ?
ಪ್ರದೀಪ್ ಮಾಲ್ಗುಡಿ ಹಿರಿಯ ಉಪ ಸಂಪಾದಕ

No comments:

Post a Comment