Search This Blog

Tuesday 13 June 2017

ಎಲ್ಲ ಜಾತಿಯ ಬಡವರಿಗೆ ಮೀಸಲಾತಿ: ಸಕಾರಾತ್ಮಕ ನಿರ್ಧಾರ

ಮೀಸಲಾತಿ ಎಂದರೆ ಸಾಕು ಎಲ್ಲರೂ ಮೂಗು ಮುರಿಯುವ ಪರಿಸ್ಥಿತಿ ಸದ್ಯಕ್ಕೆ ದೇಶದಲ್ಲಿ ನಿರ್ಮಾಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲ ಉದ್ಯೋಗಗಳೂ ತಮ್ಮ ದೇಶದವರಿಗೆ ಮೀಸಲು ಎನ್ನುವುದನ್ನು ಸಮರ್ಥಿಸುವವರು ಕೂಡ ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಾರೆ. ಆದರೆ, ಪರೋಕ್ಷವಾಗಿ ಬಹುತೇಕರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬ್ರಾಹ್ಮಣರು, ವೈಶ್ಯ ಸೇರಿದಂತೆ ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಜನರಲ್ಲಿ ಮನೆ ಮಾಡಿರುವ ಅನ್ಯ ಜಾತಿ ದ್ವೇಷವನ್ನು ಕಡಿಮೆ ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಮೀಸಲಾತಿ ವಿರುದ್ಧ ವಾದ ಕೇಳಿಬರುತ್ತಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ. ಆದರೆ, ಸ್ವತಃ ಬಿಜೆಪಿ ಆಡಳಿತ ನಡೆಸುತ್ತಿರುವ ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಬಲಿಷ್ಠ ಜಾತಿಯ ಜನರೇ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ಬಿಜೆಪಿ ಮತ್ತು ಸಂಘ ಪರಿವಾರ ಹಾಗೂ ಇದೇ ಮನಃಸ್ಥಿತಿಯವರಲ್ಲಿ ಮೀಸಲಾತಿಯಿಂದಲೇ ದೇಶ ಅಭಿವೃದ್ಧಿ ಹೊಂದಿಲ್ಲ ಅನ್ನೋ ನಂಬಿಕೆ ಗಟ್ಟಿಯಾಗಿದೆ.
ಆದರೆ, ಕರ್ನಾಟಕದಲ್ಲಿ ಅಧಿಕಾರದಲ್ಲಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರವಾಹದ ವಿರುದ್ಧ ಈಜೋದಕ್ಕೆ ಸಿದ್ಧವಾಗಿದೆ. ರಾಜ್ಯದಲ್ಲಿರುವ ಬ್ರಾಹ್ಮಣ, ವೈಶ್ಯರು ಸೇರಿದಂತೆ ಎಲ್ಲ ಜಾತಿಯ ಬಡವ, ಶೋಷಿತ ಮತ್ತು ದಮನಿತರಿಗೆ ಮೀಸಲಾತಿ ನೀಡೋ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಹೌದು, ಎಲ್ಲ ಜಾತಿಯಲ್ಲೂ ಬಡವರು, ಶೋಷಿತರು ಇದ್ದಾರೆ. ಆದ್ದರಿಂದ ಎಲ್ಲ ಜಾತಿಗೂ ಮೀಸಲಾತಿ ಒದಗಿಸುವ ನಿರ್ಧಾರ ನಿಜಕ್ಕೂ ಕ್ರಾಂತಿಕಾರಕವಾಗಿದೆ.
ಸಾಮಾಜಿಕ ನ್ಯಾಯದ ಹಂಚಿಕೆಯಲ್ಲಿ ಮೀಸಲಾತಿ ಪಾತ್ರ ಗಮನಾರ್ಹ. ಇದುವರೆಗೆ ತಮಗೆ ಇನ್ನೊಂದು ಜಾತಿಯವರು ಅವಕಾಶ ತಪ್ಪಿಸಿದ್ದಾರೆ ಎಂಬ ಕಾರಣದಿಂದಾಗಿ ಮೀಸಲಾತಿ ವಿರುದ್ಧ ನಿಲುವು ತಳೆಯಲಾಗುತ್ತಿದೆ. ಆದರೆ, ಜನರ ಮನಸಿನಲ್ಲಿರುವ ಈ ಅತ್ಯಾಧುನಿಕ ಮೂಢನಂಬಿಕೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಇದುವರೆಗೆ ಮೇಲ್ಜಾತಿ ಎಂದು ಪರಿಗಣಿಸಲಾಗಿದ್ದು, ಮೀಸಲಾತಿಯಿಂದ ಹೊರಗಿಟ್ಟವರನ್ನು ಕೂಡ ಒಳಗೊಳ್ಳುವ ಕೆಲಸ ಸಾಧ್ಯವಾಗುತ್ತದೆ.
ಮೀಸಲಾತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಬದಲು ನಮ್ಮ ರಾಜ್ಯದಲ್ಲಿ ಸರ್ವೋದಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ. ಇಷ್ಟು ದಿನಗಳ ಕಾಲ ಬ್ರಾಹ್ಮಣರೂ ಸೇರಿದಂತೆ ಬಲಿಷ್ಠ ಜಾತಿಗಳಿಗೆ ಸಾಮಾನ್ಯ ವರ್ಗದಲ್ಲಿ ಸಿಗುತ್ತಿದ್ದ ಮೀಸಲಾತಿ ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಆರ್ಥಿಕ ಪರಿಸ್ಥಿತಿಯ ಮೇಲೆ ಆಧರಿಸಿ ಮೀಸಲಾತಿ ಸಿಗಲಿದೆ. ಈ ಮೂಲಕ ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಸೌಲಭ್ಯ ವಿಸ್ತರಣೆಯಾಗಲಿದೆ. ಮೀಸಲಾತಿ ಸೌಲಭ್ಯದ ವ್ಯಾಪ್ತಿಗೆ ಎಲ್ಲ ಜಾತಿಯ ಬಡವರನ್ನು ತರುತ್ತಿರುವುದು ನಿಜಕ್ಕೂ ಸಕಾರಾತ್ಮಕ ಅಂಶವಾಗಲಿದೆ.
ಇನ್ನು ಮೀಸಲಾತಿ ಪ್ರಮಾಣವನ್ನು ಶೇ.72ಕ್ಕೆ ಏರಿಸಲು ಕೂಡ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿ ಇದನ್ನು ಜಾರಿಗೆ ತರುವ ಕುರಿತು ಕೂಡ ರಾಜ್ಯ ಸರ್ಕಾರ ಮುಂದಡಿ ಇಡಬೇಕಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ ಸಮೀಕ್ಷೆ ಇದುವರೆಗಿನ ಎಲ್ಲ ಮೀಸಲಾತಿಯ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡುತ್ತಿದೆ. ಸರ್ಕಾ ಅಧಿಕೃತವಾಗಿ ಸಮೀಕ್ಷೆಯನ್ನು ಬಿಡುಗಡೆ ಮಾಡಿದಲ್ಲಿ ಅಲ್ಪ ಸಂಖ್ಯಾತರ ವ್ಯಖ್ಯಾನ ಕೂಡ ಬದಲಾಗುವ ಸಾಧ್ಯತೆ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಎಲ್ಲ ಜಾತಿಯ ಜನರಿಗೆ ಮೀಸಲಾತಿ ನೀಡುವ ನಿರ್ಧಾರವನ್ನು ಸ್ವಾಗತಿಸಬೇಕಿದೆ.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

No comments:

Post a Comment