Search This Blog

Tuesday 13 June 2017

2014ರಲ್ಲಿ ರೈತರ ಕುರಿತು ಮೋದಿ ಹೇಳಿದ್ದೇನು, ಮಾಡಿದ್ದೇನು?

ಪ್ರದೀಪ್ ಮಾಲ್ಗುಡಿ
2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ದೇಶ ಸುತ್ತಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಭರಪೂರ ಭರವಸೆಗಳ ಮಳೆ ಸುರಿಸಿದ್ದರು. ಅವುಗಳಲ್ಲಿ ಒಂದು ಪ್ರಮುಖ ಭರವಸೆ ಬೆಳೆಗಳಿಗೆ ಸಂಬಂಧಿಸಿದಂತೆ ಯಶಸ್ವಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದೂ ಒಂದಾಗಿತ್ತು. ಇದೇ ಸಲಹೆಯನ್ನು ಸ್ವಾಮಿನಾಥನ್ ಆಯೋಗ ಯುಪಿಎ ಆಡಳಿತದ ಅವಧಿಯಲ್ಲಿ ಶಿಫಾರಸು ಮಾಡಿತ್ತು. ಅಂದು ಸ್ವಾಮಿನಾಥನ್ ಅವರ ಸಲಹೆಗಳನ್ನೇ ಇಂದು ದೇಶದ ರೈತರು ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
2014ರಲ್ಲಿ ಬೆಳೆಗಳಿಂದ ಶೇ. 50ರಷ್ಟು ಲಾಭವಾಗುವಂತೆ ಮಾಡುತ್ತೇನೆ ಮತ್ತು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇನೆ ಎಂದು ಕೂಡ ಮೋದಿಯವರು ಹೇಳಿಕೊಂಡಿದ್ದರು. ಈಗ ಅದೇ ಬೇಡಿಕೆಯನ್ನು ರೈತರು ಇಟ್ಟುಕೊಂಡು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರೈತರ ಬೇಡಿಕೆಗಳಿಗೂ ಮೋದಿಯವರ ಭರವಸೆಗಳಿಗೂ ಅಕ್ಷರಶಃ ತಾಳೆಯಾಗುತ್ತಿದೆ.
ಏಪ್ರಿಲ್ 15, 2014ರಂದು ಜಾರ್ಖಂಡ್​​ನ್​​ ಹಜಾರಿಬಾಘ್​​ನಲ್ಲಿ ಎನ್​​ಡಿಎ ಪರ ಭಾಷಣ ಮಾಡಿದ್ದ ಮೋದಿಯವರು ನಾವು ಅಧಿಕಾರಕ್ಕೆ ಬಂದರೆ, ಕನಿಷ್ಠ ಬೆಂಬಲ ಬೆಲೆಯನ್ನು ಏರಿಸುತ್ತೇವೆ ಎಂದಿದ್ದರು. ಹೊಸ ನಿಯಮಾವಳಿಗಳನ್ನು ರೂಪಿಸಿ, ಕೃಷಿ ಉತ್ಪನ್ನವನ್ನು ಏರಿಸುವ ಭರವಸೆ ನೀಡಿದ್ದನ್ನು ಮೋದಿಯವರು ವಿದೇಶ ಪ್ರವಾಸ ಮಾಡುವ ವೇಳೆಯಾದರೂ ನೆನಪಿಸಿಕೊಳ್ಳುತ್ತಾರೋ ಇಲ್ಲವೋ? ಯಾರಿಗೂ ಗೊತ್ತಿಲ್ಲ. ಆದರೆ, ಅವರು ನೀಡಿದ್ದ ಭರವಸೆಯನ್ನು ನೆನಪಿಸುವ ಹೊಣೆಗಾರಿಕೆಯನ್ನು ಸ್ವಪಕ್ಷ, ವಿಪಕ್ಷ ಮತ್ತು ಮಾಧ್ಯಮಗಳೂ ಮಾಡುತ್ತಿಲ್ಲ. ಇನ್ನು ತಾವು ನೀಡಿದ ಇದೇ ಭರವಸೆಯನ್ನು ತವರು ರಾಜ್ಯ ಗುಜರಾತ್​ನ ಸುರೇಂದ್ರ ನಗರದಲ್ಲೂ ಪುನರಾವರ್ತಿಸಿದ್ದರು. ಅಲ್ಲಿ ಅವರ ಮಾತುಗಳಿಗೆ ಭಾರೀ ಸಂಖ್ಯೆಯಲ್ಲಿ ಹತ್ತಿ ಬೆಳೆಯುವ ರೈತರು ಸಾಕ್ಷಿಯಾಗಿದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ, ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ನಿರ್ಣಾಯಕವಾದ ಬದಲಾವಣೆ ತರುತ್ತೇನೆ ಎನ್ನುವುದು ಅವರ ಭರವಸೆಯಾಗಿತ್ತು. ಅಲ್ಲದೇ, ಬೀಜ, ನೀರಾವರಿ, ವಿದ್ಯುತ್, ಕೃಷಿ ಉಪಕರಣಗಳು, ಔಷಧಿ, ರಸಗೊಬ್ಬರು ಮತ್ತು ಇತರ ವೆಚ್ಚಗಳನ್ನು ಆಧರಿಸಿ ಶೇ. 50ರಷ್ಟು ಲಾಭವನ್ನು ರೈತರಿಗೆ ತಂದುಕೊಡುತ್ತೇನೆ. 100 ರೂ. ವೆಚ್ಚವಾಗಿದ್ದಲ್ಲಿ 150 ರೂ. ಆದಾಯ ತಂದುಕೊಡುತ್ತೇನೆ ಎಂದು ಅವರು ಭರವಸೆಯ ಆಣಿಮುತ್ತುಗಳನ್ನು ಉದುರಿಸಿದ್ದರು.
ಆದರೆ, ಅವರು ಅಧಿಕಾರ ಅನುಭವಿಸಿದ ಈ ಮೂರು ವರ್ಷಗಳಲ್ಲಿ ತಮ್ಮ ಭರವಸೆಯನ್ನು ಅಪ್ಪಿತಪ್ಪಿಯೂ ನೆನೆಪಿಸಿಕೊಂಡಿಲ್ಲ. ಭರವಸೆಯನ್ನು ಈಡೇರಿಸಲು ಒಂದು ಹೆಜ್ಜೆಯನ್ನಾದರೂ ಅವರಾಗಲಿ, ಸರ್ಕಾರವಾಗಲಿ ಇಟ್ಟಿದ್ದಲ್ಲಿ ರೈತರು ಇಂದು ನೇಣಿನ ಕುಣಿಕೆಗೆ ಕೊರಳೊಡ್ಡುವುದು ಮತ್ತು ವಿಷ ನುಂಗಿ ನೀಲಕಂಠನ ಅಪರಾವತರವನ್ನು ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.
ಸದ್ಯದ ಮಾಹಿತಿಯ ಪ್ರಕಾರ ದೇಶದ 162 ಜಿಲ್ಲೆಗಳಲ್ಲಿ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಜೂನ್ 1ರಿಂದ ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ರೈತರು ಬೀದಿಗಿಳಿದಿದ್ದಾರೆ. ತಮಿಳುನಾಡು ರೈತರು ದೆಹಲಿಯಲ್ಲಿ ವಿವಿಧ ಶೈಲಿಯಲ್ಲಿ ಪ್ರತಿಭಟನೆ ನಡೆಸಿ, ಚೆನ್ನೈನಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಸಾಲ ಮನ್ನಾ ಅವರ ಪ್ರಮುಖ ಬೇಡಿಕೆಯಾದರೆ ಸೂಕ್ತ ಬೆಂಬಲ ಬೆಲೆಗೂ ಅವರು ಆಗ್ರಹಿಸಿದ್ದಾರೆ.
ಅಹಮದ್ ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಪ್ರತಿ ವರ್ಷ ತಾವು ಎದುರಿಸುವ ಕೃಷಿ ಸಮಸ್ಯೆ ಕುರಿತು ರೈತರು ಸಭೆ ಸೇರಿದ್ದರು. ಮಹಾರಾಷ್ಟ್ರದ ರೈತರ ಮುಷ್ಕರಕ್ಕೆ ಮುನ್ನುಡಿಯಾಗಿದ್ದು ಇದೇ ವರ್ಷದ ಏಪ್ರಿಲ್ 3. ಅಂದಿನ ತಮ್ಮ ಭೇಟಿಯ ವೇಳೆ ರೈತರು ತಮ್ಮ ದುರಂತಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡದ ಸರ್ಕಾರಗಳೇ ಹೊಣೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದ್ದರಿಂದ ಈ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಅವರು ಯೋಜನೆ ರೂಪಿಸಿದರು. ಗ್ರಾಮಸಭೆ ಕೂಡ ಈ ಕುರಿತು ನಿರ್ಣಯ ಕೈಗೊಂಡಿತ್ತು. ಅಲ್ಲದೇ, ತಮ್ಮ ಸಮಸ್ಯೆಗೆ ಸರ್ಕಾರ ಪರಿಹಾರ ಹುಡುಕಬೇಕು ಎಂದು ಕೂಡ ರೈತರು ಆಗ್ರಹಿಸಲು ವೇದಿಕೆ ಸಿದ್ಧಗೊಳಿಸುತ್ತಿದ್ದರು. ಇದರೊಂದಿಗೆ ಸ್ವಾಮಿನಾಥನ್ ವರದಿ ಜಾರಿಯನ್ನೂ ತಮ್ಮ ಬೇಡಿಕೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ರೈತ ಹೋರಾಟಗಾರರು ನಿರ್ಧಿಸಿದರು. ದೀರ್ಘಕಾಲೀನ ಪರಿಹಾರಕ್ಕಾಗಿ ಅವರು ಈ ವರದಿಯ ಮೊರೆ ಹೋಗುವುದೇ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು.
ಅಹಮದ್ ನಗರ ಜಿಲ್ಲೆಯ ಗ್ರಾಮ ಸಭೆ ತೆಗೆದುಕೊಂಡ ನಿರ್ಣಯ 2,500 ಪಂಚಾಯಿತಿಗಳಿಗೆ ವಿಸ್ತರಣೆಯಾಯ್ತು. ಇದರಿಂದಾಗಿ ರಾಜ್ಯದಲ್ಲಿ ಭಾರೀ ಸಂಚಲನ ಉಂಟಾಯಿತು. ಈ ಹೋರಾಟಕ್ಕೆ ಆತ್ಮಕ್ಲೇಶ ಯಾತ್ರೆ ಎಂಬ ಹೆಸರನ್ನೂ ನೀಡಲಾಯ್ತು. ಕಡೆಗೆ ಜೂನ್ ಒಂದರಂದು ರಾಜ್ಯದ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ಆರಂಭಿಸಿದರು. ಈ ಅವಧಿಯಲ್ಲಿ ಒಟ್ಟು 8 ರೈತರು ರಾಜ್ಯ ಸರ್ಕಾರವನ್ನು ಹೊಣೆಯಾಗಿಸಿ ಆತ್ಮಹತ್ಯೆಗೆ ಶರಣಾದರು. ರೈತರ ಪ್ರತಿಭಟನೆ ಆರಂಭವಾದ 11 ದಿನಗಳ ನಂತರ ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಘೋಷಿಸಿದೆ.
ಆದರೆ, ಬೆಂಬಲ ಬೆಲೆ, ವೃದ್ಧಾಪ್ಯ ವೇತನ ಮತ್ತು ಸ್ವಾಮಿನಾಥನ್ ವರದಿ ಅನುಷ್ಠಾನದ ಕುರಿತು ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಇದೇ ಸಮಯದಲ್ಲಿ ಮಧ್ಯಪ್ರದೇಶ ರೈತರು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿ 5 ರೈತರು ಸೇರಿ ಆರು ಜನರನ್ನು ಬಲಿತೆಗೆದುಕೊಳ್ಳಲಾಗಿತ್ತು.
ರಾಷ್ಟ್ರೀಯ ರೈತರ ಆಯೋಗ ಅಥವಾ ಸ್ವಾಮಿನಾಥನ್ ಆಯೋಗವನ್ನು 2004ರಲ್ಲಿ ರಚಿಸಲಾಗಿತ್ತು. ದೇಶದಾದ್ಯಂತ ನಡೆಯುತ್ತಿದ್ದ ರೈತರ ಪ್ರತಿಭಟನೆಗಳೇ ಈ ಆಯೋಗ ರಚನೆಗೆ ಕಾರಣ. ಕೃಷಿ ವಿಜ್ಞಾನಿ ಎಂ ಎಸ್ ಸ್ವಾಮಿನಾಥನ್ ಆಯೋಗ ಐದು ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ತ್ವರಿತ ಮತ್ತು ಹೆಚ್ಚು ರೈತರನ್ನು ಒಳಗೊಳ್ಳುವಿಕೆಯ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ವರದಿ ಅಭಿಪ್ರಾಯಪಟ್ಟಿತ್ತು. 2006ರಲ್ಲಿ ಸಲ್ಲಿಸಿದ ಅಂತಿಮ ವರದಿ ಇದುವರೆಗೆ ಧೂಳು ತಿನ್ನುತ್ತಾ ಕೂತಿದೆ.
ರೈತರ ಯಾತನೆಗಳಿಗೆ ಅಂತ್ಯಹಾಡಲು ಬಹು ಆಯಾಮದ ಸಲಹೆ, ಸೂಚನೆಗಳನ್ನು ಆಯೋಗ ನೀಡಿತ್ತು. ಆರೋಗ್ಯ ವಿಮೆ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು, ಆತ್ಮಹತ್ಯೆ ತಡೆ ಕೇಂದ್ರಗಳ ಸ್ಥಾಪನೆ ಮೊದಲಾದ ಅಂಶಗಳನ್ನು ಆಯೋಗ ಪ್ರಸ್ತಾಪಿಸಿತ್ತು. ರಾಜ್ಯ ರೈತ ಆಯೋಗಗಳ ಸ್ಥಾಪನೆಯನ್ನೂ ಒಳಗೊಂಡಂತೆ ರೈತರ ಸಮಸ್ಯೆಗಳ ನಿವಾರಣೆ ಮತ್ತು ಸಾಮಾಜಿಕ ಭದ್ರತೆ ಒದಗಿಸುವಂತೆ ಸಲಹೆ ನೀಡಿತ್ತು. ಈಗ ಇವೇ ಬೇಡಿಕೆಗಳು ರೈತರಿಂದ ವ್ಯಕ್ತವಾಗುತ್ತಿವೆ. 2014ರ ಚುನಾವಣಾ ಕಾಲದ ಭರವಸೆಗಳು ಈಗಲಾದರೂ ಪ್ರಧಾನಿ ಮೋದಿಯವರಿಗೆ ನೆನಪಾಗುತ್ತದೆಯೇ? ಎಂದು ರೈತ ಸಮುದಾಯ ಕಾಯುತ್ತಿದೆ.

No comments:

Post a Comment