Search This Blog

Monday 28 April 2014

ನ್ಯಾಯಬೆಲೆ ಅಂಗಡಿ ಬಂದ್ ನಿರ್ಣಯ: ಖಾಸಗಿ ಕಂಪನಿಗಳ ಲಾಭಿಯ ಅನುಮಾನ ಮೂಡಿಸುತ್ತಿದೆ
         ಪ್ರದೀಪ್ ಮಾಲ್ಗುಡಿ
ರಾಜ್ಯದಾದ್ಯಂತ ಇರುವ ಸುಮಾರು ೨೨೦೦೦ ನ್ಯಾಯಬೆಲೆ ಅಂಗಡಿಗಳಲ್ಲಿ ೨೦೦ ಕಾರ್ಡ್‌ಗಳಿಗಿಂತ ಕಡಿಮೆ ಸಂಖ್ಯೆಯನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗಳು ಹಾಗೂ ಸುಮಾರು ೧೫೦೦೦ ಸೀಮೆಎಣ್ಣೆ ಚಿಲ್ಲರೆ ಅಂಗಡಿಗಳಲ್ಲಿ ೫೦೦೦ ಅಂಗಡಿಗಳನ್ನು ರದ್ದುಗೊಳಿಸುವ ನಿರ್ಧಾರದ ಕುರಿತು ಆಹಾರ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಲೋಚಿಸುತ್ತಿರುವುದು ಸರಿಯಾದ ಕ್ರಮವಲ್ಲ.
ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯಲೋಪ
ಸರ್ಕಾರಿ ಯೋಜನೆಗಳ ಸಮರ್ಪಕವಾದ ಜಾರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಸಂಪೂರ್ಣ ವಿಫಲವಾಗಿವೆ. ಸರ್ಕಾರಗಳ ಯೋಜನೆಗಳಲ್ಲಿ ೧೦% ಕೂಡ ನೈಜ ಫಲಾನುಭವಿಗಳ ಕೈಸೇರುವುದಿಲ್ಲ. ದೇಶ, ರಾಜ್ಯಗಳ ರಾಜಧಾನಿಗಳಿಂದ ಹೊರಡುವ ಯೋಜನೆಗಳಿಗೆ ಅಡಿಗಡಿಗೆ ಅಡೆತಡೆಗಳು ಎದುರಾಗುತ್ತವೆ.
ದಲ್ಲಾಳಿಗಳು, ಅಧಿಕಾರಿಗಳ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಫಲಾನುಭವಿಗಳ ಕೈಗೆ ತಲುಪುವಷ್ಟರಲ್ಲಿ ಅಪಾರ ಪ್ರಮಾಣದ ಸಮಯ ಹಿಡಿಯುವುದಲ್ಲದೆ, ಈ ಯೋಜನೆಗಳ ೯೦%ನಷ್ಟು ಮೊತ್ತ ಸೋರಿಕೆಯಾಗಿಬಿಟ್ಟಿರುತ್ತದೆ. ಇಂತಹ ವಿಳಂಬ ನೀತಿಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿದೆ.
ಆದ್ದರಿಂದ ಸರ್ಕಾರಗಳ ಬಡತನ ನಿರ್ಮೂಲನೆ, ಪಡಿತರ ಯೋಜನೆ, ಸಾಲ ಯೋಜನೆ, ಸಹಾಯಧನ, ಶಿಷ್ಯವೇತನ, ವಿಪತ್ತು ನಿರ್ವಹಣಾ ಪರಿಹಾರ ಯೋಜನೆಗಳನ್ನೆಲ್ಲ ನಿಯಮಿತ ಅವಧಿಯಲ್ಲಿ ಯೋಜನೆಗಳ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸರ್ಕಾರಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ಕರ್ತವ್ಯಲೋಪವೆಂದು ಪರಿಗಣಿಸಬೇಕಾಗಿದೆ. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಆರಂಭಿಸಿರುವ ಸಕಾಲ ಯೋಜನೆಯನ್ವಯ ಎಲ್ಲ ಇಲಾಖೆಗಳನ್ನು ತರಲು ಈಗ ಸಕಾಲ. ಆಗ ಕಾಯ್ದೆಯ ಭಯದಿಂದಲಾದರೂ ಕನಿಷ್ಠ ಕೆಲಸಗಳು ನಡೆಯಬಹುದು.
ಇಬ್ಬಗೆಯ ನೀತಿ 
ಇನ್ನು ಆಹಾರ ಮತ್ತು ಕಟುಂಬ ಇಲಾಖೆಯ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ಮಾಲಿಕರು ರಾಜಕೀಯ ಒತ್ತಡವನ್ನು ಅನುಸರಿಸುತ್ತಿರುವುದರ ಕುರಿತು ತಕರಾರು ಎತ್ತಿದ್ದಾರೆ. ಈ ತಕರಾರು ನ್ಯಾಯಸಮ್ಮತ. ಆದರೆ, ಎಲ್ಲ ಹೊಸ ಸರ್ಕಾರಗಳೂ ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ಮನೋಧರ್ಮ, ಕಾರ‍್ಯಸೂಚಿ, ಜಾತಿ ಇತ್ಯಾದಿಗಳಿಗೆ ಅನುಗುಣವಾದ ವ್ಯಕ್ತಿಗಳಿಗೆ ವಯೋಮಾನ, ಅನುಭವ, ಸೇವಾಜೇಷ್ಠತೆಯ ಯಾವ ಮಾನದಂಡಗಳನ್ನೂ ಅನುಸರಿಸದೆ ಉನ್ನತ ಹುದ್ದೆಗಳನ್ನು, ಆಯಕಟ್ಟಿನ ಜಾಗಗಳನ್ನು ದಯಪಾಲಿಸಿಲ್ಲವೆ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್., ಅಧಿಕಾರಿಗಳು, ಸಬ್ ಇನ್ಸ್‌ಪೆಕ್ಟರ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಮಾಡುವುದಿಲ್ಲವೇ?
ಸ್ವತಃ ಆಹಾರ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೂ ಇಂತಹ ಒತ್ತಡದ ಕಾರಣಗಳಿಂದಾಗಿಯೇ ಈಗಿರುವ ಹುದ್ದೆಗಳಲ್ಲಿರಬಹುದು. ಹಾಗೆಯೆ, ಕರ್ನಾಟಕದ ವಿವಿಧ ನಿಗಮ, ಮಂಡಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ, ತುಳು, ಬ್ಯಾರಿ, ಜಾನಪದ, ಲಲಿತ ಕಲಾ ಅಕಾಡೆಮಿಗಳು ಇತ್ಯಾದಿಗಳಿಗೆ ನೇಮಕ ಮಾಡುವಾಗ ನಡೆಯುವ ಒತ್ತಡಗಳನ್ನು ಸಹಿಸಿಕೊಂಡಿಲ್ಲವೇ? ಆದರೆ ದೀಪದ ಬುಡ ಕತ್ತಲು. ಆದ್ದರಿಂದ ತಮಗೆ ಅನ್ವಯಿಸಿಕೊಳ್ಳದೆ ತಮ್ಮ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನಕ್ಕೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.
ಈ ಮೇಲಿನವುಗಳಿಗೆ ಅನ್ವಯಿಸದ ರಾಜಕೀಯ ಒತ್ತಡವನ್ನು ಜನೋಪಯೋಗಿ ಕಾರ‍್ಯಕ್ರಮಗಳ ಸಮರ್ಪಕ ವಿಲೇವಾರಿಯ ಸಂದರ್ಭದಲ್ಲಷ್ಟೇ ನೆನಪಿಸಿಕೊಳ್ಳುತ್ತಿರುವುದು ಏಕೆ? ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಮತ್ತೊಂದು ದೇಶೀಯ ಹಾಗೂ ಅಂತರರಾಷ್ಟ್ರೀಯ ಖಾಸಗಿ ರಾಜಕೀಯ ಒತ್ತಡವಿರುವುದು ಎದ್ದು ಕಾಣುತ್ತದೆ.
ಖಾಸಗಿಯವರಿಗೆ ಮಣೆ ಹಾಕುವ ಹುನ್ನಾರ
ಮತ್ತೊಂದು ಅನಾಹುತಕಾರಿ ಆಲೋಚನೆಯನ್ನು ಆಹಾರ ಮತ್ತು ಕಟುಂಬ ಇಲಾಖೆಯ ಅಧಿಕಾರಿಗಳು  ಮಾಡುತ್ತಿದ್ದಾರೆ. ತಮ್ಮ ಕರ್ತವ್ಯಲೋಪವನ್ನು ತಿದ್ದಿಕೊಳ್ಳುವ ಬದಲು ಇನ್ನೊಂದು ಕರ್ತವ್ಯಲೋಪಕ್ಕೆ ಸಜ್ಜಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳನ್ನು ಖಾಸಗಿ ವ್ಯಾಪಾರಿ ಮಳಿಗೆಗಳಿಗೆ(ಫುಡ್‌ವರ್ಲ್ಡ್‌ನಂತಹ ಅಂಗಡಿಗಳಲ್ಲಿ ಪಡಿತರ ಮಾರಾಟ ವ್ಯವಸ್ಥೆಯನ್ನು ಆರಂಭಿಸುವ ಚಿಂತನೆ) ಪರವಾನಗಿ ನೀಡುವುದರ ಕುರಿತ ಚಿಂತನೆಯಲ್ಲಿ ಖಾಸಗಿ ಲಾಭಿ ಹಾಗೂ ಒತ್ತಡದ ಕಮಟು ವಾಸನೆ ವ್ಯಾಪಿಸುತ್ತಿದೆ. ಜೊತೆಗೆ ಸರ್ಕಾರ ಹಾಗೂ ಅಧಿಕಾರಿಗಳ ಖಾಸಗೀಕರಣದ ಹುನ್ನಾರವನ್ನು ಈ ಯೋಜನೆ ಸಮರ್ಥಿಸುತ್ತದೆ.
ಈ ಹುನ್ನಾರವೂ ಸರ್ಕಾರದ ನಿಯಮಗಳನ್ನು ಮೀರುವಂತದ್ದೇ ಆಗಿದೆ. ಏಕೆಂದರೆ, ಈಗಾಗಲೇ ಅಸ್ಥಿತ್ವದಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಪರವಾನಗಿ ನೀಡುವಾಗ ಒಂದು ನಿಯವನ್ನು ಅನುಸರಿಸಲಾಗಿದೆ. ಆ ನಿಯವೆಂದರೆ, ಸರ್ಕಾರಿ ನ್ಯಾಯಬೆಲೆ ಅಂಗಡಿ ನಡೆಸುವವರು ಅದರ ಜೊತೆಗೆ ದಿನಸಿ ಅಂಗಡಿಯನ್ನು ನಡೆಸುವಂತಿಲ್ಲ. ಇದು ಸರಿಯಾದ ನಿಯಮ. ಏಕೆಂದರೆ, ದಿನಸಿ ಅಂಗಡಿ ನಡೆಸಲು ಅನುಮತಿ ನೀಡಿದಲ್ಲಿ ಬಿ.ಪಿ.ಎಲ್. ಕಾರ್ಡ್‌ದಾರರ ಪಡಿತರವನ್ನು ಮಾರುಕಟ್ಟೆ ದರದಲ್ಲಿ ಈ ಮಾಲೀಕರು ಮಾರಾಟ ಮಾಡುವ ಅಪಾಯವುಂಟು. ಈ ಯಾವುದೇ ಸರ್ಕಾರಿ ನಿಯಮಗಳೂ ಈ ಅಧಿಕಾರಿಗಳ ಗಮನಕ್ಕೆ ಬಂದಂತಿಲ್ಲ.
ಫುಡ್‌ವರ್ಲ್ಡ್, ರಿಲಯನ್ಸ್ ಫ್ರೆಶ್, ಮೆಟ್ರೊ, ವಾಲ್‌ಮಾರ್ಟ್‌ನಂತಹ ದೇಶೀ, ವಿದೇಶೀ ಕಂಪನಿಗಳೆಲ್ಲವಕ್ಕೂ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ದೊಡ್ಡ ಪೈಪೋಟಿ ನೀಡುತ್ತಿವೆ. ಹೇಗೆಂದರೆ, ಅಲ್ಲಿ ಕನಿಷ್ಠ ಬೆಲೆಯ ಅಕ್ಕಿ ೩೫ ರೂಪಾಯಿಗಳು. ಅದೇ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ೩೦ರೂಪಾಯಿಗೆ ೩೦ ಕೆಜಿ ಅಕ್ಕಿ. ಇಂತಹ ಸರ್ಕಾರಿ ವ್ಯವಸ್ಥೆಯನ್ನು ನಿರ್ನಾಮ ಮಾಡುವ  ವ್ಯವಸ್ಥಿತ ಹುನ್ನಾರ ನಡೆಯುತ್ತಿರಬಹುದು. ಸರ್ಕಾರ ಈ ಹುನ್ನಾರಗಳನ್ನು ಅರ್ಥಮಾಡಿಕೊಂಡು ಅಧಿಕಾರಿಗಳ ತುಘಲಕ್ ದರ್ಬಾರಿಗೆ ಲಗಾಮು ಹಾಕಬೇಕಾಗಿದೆ.


No comments:

Post a Comment