Search This Blog

Monday, 28 April 2014

ಪಕ್ಷಾಂತರ ತರವಲ್ಲ                                  - ಪ್ರದೀಪ್ ಮಾಲ್ಗುಡಿ
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಶುರುವಾಗುತ್ತದೆ. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಪಕ್ಷಗಳು ನಡೆಸಿಲೊಳ್ಳುತ್ತಿರುವ ರೀತಿಯೂ ಈ ಪ್ರಕ್ರಿಯೆಗೆ ಕಾರಣವಾಗಿದೆ. ಜೊತೆಗೆ ಅಧಿಕಾರ ಲಾಲಸೆ ಪಕ್ಷಾಂತರಕ್ಕೆ ಮೂಲ ಕಾರಣವಾಗಿದೆ. ಸ್ವಾಭಿಮಾನದ ಹೆಸರಿನಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆಯ ವೇಳೆ ಪಕ್ಷ ತೊರೆದಿದ್ದ ಇಬ್ಬರು ಮುಖಂಡರು ಹೊಸ ಪಕ್ಷಗಳನ್ನು ಸ್ಥಾಪಿಸಿದರು. ಈಗ ಲೋಕಸಭಾ ಚುನಾವಣೆಯ ಹೊತ್ತಿಗೆ ಮಾತೃ ಪಕ್ಷಕ್ಕೆ ಮರಳಿದ್ದಾರೆ. ಟಿಕೆಟ್ ವಂಚಿತ ಕೇಂದ್ರದ ಮಾಜಿ ಸಚಿವರು ಈಗ ಯಾವ ಪಕ್ಷಕ್ಕೆ ಹೋಗಬೇಕೆಂಬ ಜಿಜ್ಞಾಸೆಯಲ್ಲಿದ್ದಾರೆ. ಎಲ್ಲ ಪಕ್ಷಗಳು ಈ ಸಮಸ್ಯೆಯನ್ನು ಪ್ರತಿ ಚುನಾವಣೆಯಲ್ಲೂ ಎದುರಿಸುತ್ತಿವೆ. ಪ್ರಾದೇಶಿಕ ಪಕ್ಷವೊಂದು ಅನ್ಯ ಪಕ್ಷಗಳ ಟಿಕೆಟ್ ವಂಚಿತ ಅತೃಪ್ತರ ಮೇಲೆ ಕಣ್ಣಿಟ್ಟುಕೊಂಡು ಕಾಯುವ ತಂತ್ರವನ್ನು ಅನುಸರಿಸುತ್ತಿದೆ. ರಾಜಕೀಯ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಪಕ್ಷಾಂತರಿಗಳಿಗೆ ಟಿಕೆಟ್ ನೀಡುತ್ತವೆ. ಆಗ ತಮ್ಮ ಪಕ್ಷದಲ್ಲಿರುವ ನಿಷ್ಠಾವಂತ ಕಾರ‍್ಯಕರ್ತರು ಹಾಗೂ ನಾಯಕರಿಗೂ ಅವಮಾಣವಾಗುತ್ತದೆ.
ಇಲ್ಲಿ ಕುಸಿಯುತ್ತಿರುವುದು ನೈತಿಕ ಬದ್ಧತೆ. ಪಕ್ಷ, ತತ್ವ, ಸಿದ್ಧಾಂತ, ವೈಯಕ್ತಿಕ ಬದ್ಧತೆ, ಪ್ರಾದೇಶಿಕ ಸಮಸ್ಯೆಗಳು, ಮತದಾರರ ಆಶಯಗಳನ್ನು ಪಕ್ಷಾಂತರ ಮಾಡುವ ಜನಪ್ರತಿನಿಧಿಗಳು ಕಡೆಗಣಿಸುತ್ತಿದ್ದಾರೆ. ಆದರೂ ಅವರಲ್ಲಿ ಕೆಲವರು ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತಿದ್ದಾರೆ. ಆ ಮೂಲಕ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯವನ್ನು ವಿರೋಧಿಸುವ ದೃಢ ನಿಲುವನ್ನ ತಾಳುವ ಮೂಲಕ ಪಕ್ಷಗಳು ಹಾಗೂ ಮತದಾರರು ಪಕ್ಷಾಂತರಿಗಳಿಗೆ ಬುದ್ಧಿ ಕಲಿಸಬೇಕಾಗಿದೆ.

No comments:

Post a Comment